ಕುಪ್ಪಳ್ಳಿ ಪುಟ್ಟಪ್ಪ ಪೂರ್ಣ ಚಂದ್ರ ತೇಜಸ್ವಿ | |
---|---|
ಜನನ | ಸೆಪ್ಟೆಂಬರ್ ೮ ೧೯೩೮ ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
ಮರಣ | ಏಪ್ರಿಲ್ ೫ ೨೦೦೭ ಮೂಡಿಗೆರೆ |
ಅಂತ್ಯ ಸಂಸ್ಕಾರ ಸ್ಥಳ | ಕುಪ್ಪಳಿ, ಶಿವಮೊಗ್ಗ ಜಿಲ್ಲೆ |
ಕಾವ್ಯನಾಮ | ಪೂಚಂತೇ |
ವೃತ್ತಿ | ಕೃಷಿಕ, ಲೇಖಕ, ಛಾಯಚಿತ್ರಗಾರ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜನಪ್ರಿಯ ವಿಜ್ಞಾನ |
ವಿಷಯ | ಪರಿಸರ, ವಿಜ್ಞಾನ |
ಸಾಹಿತ್ಯ ಚಳುವಳಿ | ನವ್ಯ ಯುಗ |
ಪ್ರಮುಖ ಪ್ರಶಸ್ತಿ(ಗಳು) | ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಬಾಳ ಸಂಗಾತಿ | ರಾಜೇಶ್ವರಿ ತೇಜಸ್ವಿ |
ಮಕ್ಕಳು | ಸುಶ್ಮೀತಾ, ಈಶಾನ್ಯೆ |
ಪ್ರಭಾವಗಳು | |
nammatejaswi |
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.[೧] ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.[೨]
ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಅವರ ತಾಯಿ ಹೇಮಾವತಿ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಜನಿಸಿದರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.
ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಓರಗೆ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ,ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇವರ ಪತ್ನಿ ರಾಜೇಶ್ವರಿ. ಇವರು ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ವಾಸಿಸುತ್ತಿದ್ದರು, ಈಗ ಮರಣಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.
ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.
ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಹೊಸ ಮಿಲೇನಿಯಮ್ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.
ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ, ಕಿರಗೂರಿನ ಗಯ್ಯಾಳಿಗಳು ಹಾಗೂ ಡೇರ್ ಡೆವಿಲ್ ಮುಸ್ತಾಫಾ ಕೃತಿಗಳು ಚಲನಚಿತ್ರಗಳಾಗಿವೆ.