ನಂಬಿ ನಾರಾಯಣನ್ (ಹುಟ್ಟು: ೧೨ ಡಿಸೆಂಬರ್ ೧೯೪೧) ಒಬ್ಬರು ಭಾರತೀಯ ಏರೋಸ್ಪೇಸ್ ಎಂಜಿನಿಯರ್. ಅವರು ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿ ವಿಕಾಸ್ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುವುದರ ಮೂಲಕ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಮೊದಲ ಪಿ ಎಸ್ ಎಲ್ ವಿ ಉಡಾವಣೆಗೆ ಬಳಸಲಾದ 'ವಿಕಾಸ್ ಎಂಜಿನ್' ತಯಾರು ಮಾಡಲು ಬೇಕಾದ ಫ್ರೆಂಚ್ ತಂತ್ರಜ್ನಾನವನ್ನು ಪಡೆಯಲು ಕೆಲಸ ಮಾಡಿದ ತಂಡದ ಮುಖ್ಯಸ್ಥರಾಗಿದ್ದರು. ಇಸ್ರೋದ ಕ್ರಯೋಜೆನಿಕ್ ವಿಭಾಗದ ಉಸ್ತುವಾರಿ ಅಧಿಕಾರಿಯಾಗಿದ್ದರು. ೨೦೧೯ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು.
೧೯೯೪ರಲ್ಲಿ ಅವರ ಮೇಲೆ ಸುಳ್ಳು ಬೇಹುಗಾರಿಕೆ ಪ್ರಕರಣದಲ್ಲಿ ಸಿಲುಕಿಸಿ, ಬಂಧನಕ್ಕೊಳಗಾಗಿಸಿ ದೈಹಿಕವಾಗಿ ಹಿಂಸಿಸಲಾಗಿತ್ತು. ೧೯೯೬ರಲ್ಲಿ ಸಿ ಬಿ ಐ ಯಿಂದ ಇದು ಸುಳ್ಳು ಆರೋಪ ಎಂದು ನಿರೂಪಿಸಲ್ಪಟ್ಟಿತು ಮತ್ತು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣಯನ್ನು ನಿಲ್ಲಿಸಲು ಕೇರಳ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ೨೦೧೮ರಲ್ಲಿ ಸುಪ್ರೀಂಕೋರ್ಟಿನ ದೀಪಕ್ ಮಿಶ್ರಾ ನ್ಯಾಯಪೀಠ ನಂಬಿನಾರಾಯಣನ್ ಅವರಿಗೆ ೫೦ ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಕೊಡಬೇಕೆಂದು ಸೂಚಿಸಿತು. ಕೇರಳ ಸರ್ಕಾರವು ಅವರಿಗೆ ಇನ್ನೂ ೧.೩ ಕೋಟಿ ರೂ. ಪರಿಹಾರ ಮೊತ್ತವನ್ನು ಕೊಡಲು ತೀರ್ಮಾನಿಸಿತು. ಅವರ ಜೀವನಾಧಾರಿತ ಕಥೆಯುಳ್ಳ, ಮಾಧವನ್ ನಿರ್ದೇಶಿಸಿ ನಟಿಸಿದ ರಾಕೆಟ್ರಿ: ದ ನಂಬಿ ಎಫೆಕ್ಟ್ ಎಂಬ ಚಲನಚಿತ್ರವು ಜುಲೈ ೨೦೨೨ರಲ್ಲಿ ಬಿಡುಗಡೆಯಾಯಿತು.
ನಂಬಿ ನಾರಾಯಣನ್ ಅವರು ನಾಗರಕೋಯಿಲ್ ಊರಿನಲ್ಲಿ ತಮಿಳು ಹಿಂದೂ ಕುಟುಂಬವೊಂದರಲ್ಲಿ ಹುಟ್ಟಿದರು. ಆಗ ಅದು ತಿರುವಾಂಕೂರು ಸಂಸ್ಥಾನದಲ್ಲಿದ್ದು ಈಗ ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯಲ್ಲಿದೆ. ಅದೇ ಊರಿನ ಡಿವಿಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಮಧುರೈನ ತ್ಯಾಗರಾಜ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಆ ಸಂದರ್ಭದಲ್ಲಿ ಅವರ ತಂದೆಯು ನಿಧನರಾದರು. ತಂದೆಯ ಮರಣಾನಂತರ ತಾಯಿಯವರೂ ಅನಾರೋಗ್ಯಕ್ಕೆ ಈಡಾದರು. ನಂಬಿಯವರಿಗೆ ಇಬ್ಬರು ಸೋದರಿಯರು. ನಂಬಿಯವರು ಮೀನಾರನ್ನು ಮದುವೆಯಾದರು. ಅವರ ಇಬ್ಬರು ಮಕ್ಕಳಲ್ಲಿ ಒಬ್ಬರು ಶಂಕರ್ ನಂಬಿ ಹಾಗೂ ಮಗಳು ಗೀತಾ ಅರುಣನ್. ಅಳಿಯ ಸುಬ್ಬಯ್ಯ ಅರುಣನ್ ಅವರು ಇಸ್ರೋದಲ್ಲಿ ವಿಜ್ನಾನಿಯಾಗಿದ್ದು ಮಂಗಳಯಾನ ಯೋಜನೆಯ ನಿರ್ದೇಶಕರು ಹಾಗೂ ಪದ್ಮಶ್ರೀ ಪುರಸ್ಕೃತರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ೧೯೬೬ರಲ್ಲಿ 'ತುಂಬಾ ಈಕ್ವೆಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಶನ್ನಿ'ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ತಮ್ಮ ವೃತ್ತಿಜೀವನ ಶುರುಮಾಡಿದರು. ೧೯೬೯ರಲ್ಲಿ ಅವರಿಗೆ ನಾಸಾ ಫೆಲೋಶಿಪ್ ಸಿಕ್ಕು ಪ್ರಿನ್ನ್ಟನ್ ಯುನಿವರ್ಸಿಟಿಗೆ ಹೋದರು. ಅಲ್ಲಿ ಪ್ರೊ.ಲೂಜಿ ಕ್ರೊಕೊ ಅವರ ಮಾರ್ಗದರ್ಶನದಲ್ಲಿ ಕೆಮಿಕಲ್ ರಾಕೆಟ್ ಪ್ರೊಪಲ್ಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತದ ರಾಕೆಟ್ ತಂತ್ರಜ್ನಾನದಲ್ಲಿ ಇನ್ನೂ ಸಾಲಿಡ್ ಪ್ರೊಪೆಲ್ಲೆಂಟುಗಳ ಬಳಕೆಯೊಂದೇ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಲಿಕ್ವಿಡ್ ಪ್ರೊಪೆಲ್ಲೆಂಟುಗಳ ಪರಿಣಿತಿ ಪಡೆದು ಬಂದರು. ನಂಬಿಯವರು ವಿಕ್ರಂ ಸಾರಾಭಾಯಿಯವರಿಗೆ ಈ ಲಿಕ್ವಿಡ್ ಪ್ರೊಪೆಲ್ಲೆಂಟುಗಳ ಬಗ್ಗೆ ತಿಳಿಸಿಕೊಟ್ಟುದುದಾಗ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
೧೯೭೪ರಲ್ಲಿ Societe Europeenne de Propulsion ಸಂಸ್ಥೆಯು ಇಸ್ರೋದಿಂದ ೧೦೦ ದಿನಗಳ ಎಂಜಿನಿಯರಿಂಗ್ ಕೆಲಸದ ವಿನಿಮಯವಾಗಿ ವೈಕಿಂಗ್ ಎಂಜಿನ್ ತಂತ್ರಜ್ನಾನವನ್ನು ವರ್ಗಾಯಿಸಲು ಒಪ್ಪಿಕೊಂಡಿತು. ನಾರಾಯಣನ್ ಅವರು ಐವತ್ತೆರಡು ಎಂಜಿನಿಯರುಗಳ ಒಂದು ತಂಡವನ್ನು ಮುನ್ನೆಡೆಸಿ ಫ್ರೆಂಚರಿಂದ ಆ ಟೆಕ್ನಾಲಜಿಯನ್ನು ಪಡೆದುಕೊಳ್ಳುವ ಕೆಲಸ ಮಾಡಿದರು. ಮತ್ತೆರಡು ತಂಡಗಳು ಅದರ ಹಾರ್ಡ್ವೇರ್ ಗಳನ್ನು ಭಾರತದಲ್ಲೇ ತಯಾರಿಸಿ ಮಹೇಂದ್ರಗಿರಿಯಲ್ಲಿ ಆ ಘಟಕವನ್ನು ನಿರ್ಮಿಸಲು ಕೆಲಸ ಮಾಡಿತು. ೧೯೮೫ರಲ್ಲಿ 'ವಿಕಾಸ್' ಎಂಬ ಹೆಸರಿನ ಮೊದಲ ಎಂಜಿನ್ ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ವಿಚಕ್ಷಣಾ ದಳದ ಅಧಿಕಾರಿ ಆರ್. ಬಿ. ಶ್ರೀಕುಮಾರ್ ನಂಬಿಯವರು ಟೆಂಡರೊಂದನ್ನು ತಿದ್ದಿದ್ದಾರೆ ಎಂಬ ಬಗ್ಗೆ ಆರೋಪ ಹೊರಿಸಿ ತನಿಖೆ ಮಾಡಲಾಗಿ ನಂತರ ಆರೋಪ ಖುಲಾಸೆಗೊಂಡಿತು. ೧೯೯೪ರಲ್ಲಿ ನಂಬಿಯವರು ಸ್ವಯಂರಾಜೀನಾಮೆಯ ಕೋರಿಕೆ ಸಲ್ಲಿಸಿದರು. ಒಂದು ತಿಂಗಳ ನಂತರ ಸುಳ್ಳು ಪ್ರಕರಣವೊಂದರಲ್ಲಿ ಕೇರಳ ಪೋಲಿಸರು ಅವರನ್ನು ಬಂಧಿಸಿದರು.
ವಿಕಾಸ್ ರಾಕೆಟ್ ಎಂಜಿನ್ನಿನ ಅಭಿವೃದ್ಧಿಯಲ್ಲಿ ಅವರ ಸೇವೆಗಾಗಿ ೨೦೧೯ ಜನವರಿ ೨೬ರಂದು ಭಾರತ ಸರ್ಕಾರದಿಂದ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಸ್ರೊ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಆ ವೃದ್ಧರ ದೀರ್ಘ ಪರಿಶ್ರಮ, ಕಠೋರ ತಪಸ್ಸು ಇತ್ತು. 71 ರ ಆ ವಯೋವೃದ್ಧರೇ ಎಸ್.ನಂಬಿ ನಾರಾಯಣನ್. ಭಾರತದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿಗಳ ಸಾಲಿನಲ್ಲಿ—ಇವರ ಹೆಸರನ್ನು ಸೇರಿಸಬೇಕು. ಆ ಅತ್ಯಂತ ಮಹತ್ವದ ಯೋಜನೆಯ ರೂವಾರಿಯಾಗಿದ್ದವರು ಇದೇ ನಾರಾಯಣನ್. ರಾಕೆಟ್ಗಳಲ್ಲಿ ದ್ರವ ಇಂಧನ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ಏನು ಲಾಭವಾಗಲಿದೆ ಎಂಬುದನ್ನು ಅವರು 70 ರ ದಶಕದಲ್ಲೇ ಅರಿತಿದ್ದರು. ಇಷ್ಟಕ್ಕೂ ಪಿಎಸ್ಎಲ್ವಿ ರಾಕೆಟ್ನಲ್ಲಿ ಬಳಸುವ :`ವಿಕಾಸ್ ಎಂಜಿನ್’ ವಿನ್ಯಾಸಗೊಳಿಸಿದವರೂ ಕೂಡ ಇದೇ ನಂಬಿ ನಾರಾಯಣನ್. ಜಿಎಸ್ಎಲ್ವಿ ರಾಕೆಟ್ ನಿಜವಾಗಿ 13 ವರ್ಷಗಳ ಹಿಂದೆಯೇ ನಭಕ್ಕೆ ಜಿಗಿದು ದಾಖಲೆ ಬರೆಯಬೇಕಾಗಿತ್ತು.
ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನದಲಿ 'ಅತಿಯಾಗಿ ತಂಪಾಗಿಸಿದ ದ್ರವ ಇಂಧನ' ಬಳಸಲಾಉತ್ತದೆ. ಅದು ಮೈನಸ್ ೧೮೩/183ಡಿಗ್ರಿ ಸೆಲ್ಸಿಯಸ್ ತಂಪಾಗಿಸಿರುವ ಆಮ್ಲ ಜನಕ ಮತ್ತು ಮೈನಸ್ ೨೫೩/253 ಡಿಗ್ರಿ ಸೆಲ್ಸಿಯಸ್ ತಂಪಾಗಿಸಿರುವ ಜಲಜನಕದ ಇಂಧನ. ಇದು ಭಾರಿತೂಕದ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ತಳ್ಳುವುದಕ್ಕೆ ಅಗತ್ಯವಾದ ಅಪಾರ ಪ್ರಮಾಣದ ಶಕ್ತಿಯುಳ್ಳದ್ದು. ಘನ ಇಂಧನ ಉಪಯೋಗಿಸುವ ರಾಕೆಟ್‘ ಗೆ ಹೋಲಿಸಿದರೆ ಈ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ ಬಹಳ ಸಂಕೀರ್ಣವುಳ್ಳದ್ದು. ಈ ತಂತ್ರಜ್ಞಾನ ಭಾರತಕ್ಕೆ ದಕ್ಕದಂತೆ ಮಾಡಲು ಯು.ಎಸ್.ಎ. ರಷ್ಯಾದ ಮೇಲೆ ವಿಪರೀತ ಒತ್ತಡ ಹೇರಿತ್ತು. ಅದಕ್ಕಾಗಿ ಅದ್ಭುತ ಪ್ರತಿಭೆಯ ವಿಜ್ಞಾನಿ ನಂಬಿ ನಾರಾಯಣನ್ ಇದನ್ನು -ಜಿಎಸ್,ಎಲ್,ವಿ ಯನ್ನು ರಾಕೆಟ್` ಸಾಧಿಸಲು ಬಿಡಬಾರದೆನ್ನವ ಉದ್ದೇಶದಿಂದ ಅವರನ್ನು ಇಸ್ರೋದಿಂದ ಹೊರಹಾಕಲು ವಿದೇಶದ ಕುತಂತ್ರವೇ ಎಂಬುದು ಎಲ್ಲರ ಅನುಮಾನ. ಹಿಂದೆ ಅಣು ಬಾಂಬ್ ತಯಾರಿಕೆಯ ತಂತ್ರಜ್ಞಾನ ರೂಪಿಸಿದ ಇಸ್ರೋದ ಎರಡು ಶ್ರೇಷ್ಠ ವಿಜ್ನಾನಿಗಳು ನಿಗೂಢವಾಗಿ ಸಾವನ್ನಪ್ಪಿದ್ದರು. ಇದನ್ನು ನಂಬಿಯವರು ಜ್ಞಾಪಿಸುತ್ತಾರೆ.
ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧವಾಗಬೇಕೆನ್ನುವಷ್ಟರಲ್ಲಿ 1994 ರಲ್ಲಿ ದೊಡ್ಡದೊಂದು ಸಂಗತಿ ನಡೆದು ಹೋಯಿತು. ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಆ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂತು. ಕೇರಳದ ಪೊಲೀಸರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ (೫೨ ವರ್ಷ), ಇನ್ನೊಬ್ಬ ವಿಜ್ಞಾನಿ ಶಶಿಕುಮಾರ್ ಮತ್ತೆ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದರು. 50 ದಿವಸಗಳ ಕಾಲ ನಂಬಿಯವರನ್ನು ಜೈಲಿನಲ್ಲಿಡಲಾಯಿತು. ವಿಪರೀತ ಹಿಂಸೆನೀಡಲಾಯಿತು. ಕ್ರಯೋಜೆನಿಕ್ ಯೋಜನೆ, ಜಿಎಸ್ಎಲ್ವಿ, ಪಿಎಸ್ಎಲ್ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಹತ್ತಾರು ಯೋಜನೆಗಳೂ ನೆನೆಗುದಿಗೆ ಬಿದ್ದವು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಯಿತು. ಕ್ರಯೋಜೆನಿಕ್ ಯೋಜನೆ ಹಿಂದೆ ಬಿತ್ತು.
ಬಂಧನದಲ್ಲಿದ್ದ ನಂಬಿಯವರ ಬಾಯಿ ಬಿಡಿಸಲು ಅವರಿಗೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡಲಾಗಿತ್ತು. ನಂಬಿಯವರ ಮೇಲೆ ಕೇರಳ ಪೊಲೀಸರಿಗೆ ಅನುಮಾನ ಬರಲು ಕಾರಣ – ಇಸ್ರೊಗೆ ಆಗಾಗ ಭೇಟಿ ನೀಡುತ್ತಿದ್ದ ಹಾಗೂ ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲೇ ಇದ್ದ ಮಾಲ್ಡೀವ್ಸ್ನ ಮರಿಯಂ ರಷೀದಾ ಮತ್ತು ಫೌಜಿಯಾ ಹಸನ್ ಅವರನ್ನು ಬಂಧಿಸಿದಾಗ ಅವರ ಬಳಿ ಇದ್ದ ಡೈರಿಯಲ್ಲಿ ನಂಬಿಯವರ ದೂರವಾಣಿ ಸಂಖ್ಯೆ ನಮೂದಾಗಿದ್ದು. ಬಂಧಿತ ರಷೀದಾ ಮತ್ತು ಫೌಜಿಯಾ ಬಳಿ ಕೇವಲ ನಂಬಿಯವರ ದೂರವಾಣಿ ಸಂಖ್ಯೆ ಇತ್ತು, ಎಂಬ ಏಕೈಕ ಕಾರಣಕ್ಕೆ ಇಸ್ರೊಗೆ ಸಂಬಂಧಿಸಿದ ಕೆಲವು ರಹಸ್ಯ ಮಾಹಿತಿಗಳೂ ಅವರ ಬಳಿ ಇದ್ದವು, ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿವೆ ಎಂದೆಲ್ಲ ಪೊಲೀಸರು ಆರೋಪಿಸಿದರು.
ಭಾರತದ ಸುಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ. ಅಂತಹ ಸಂಸ್ಥೆಯೊಂದರ ಹಿರಿಯ ವಿಜ್ಞಾನಿಯ ಮೇಲೆರಗಿದ ಆರೋಪವನ್ನು ಕೇವಲ ಬೇಹುಗಾರಿಕಾ ದಳದ ತನಿಖೆಯಿಂದ ಬಗೆಹರಿಸಲಾಗದು ಎಂದು ಈ ಪ್ರಕರಣವನ್ನು ಸಿಬಿಐಗೆ ಅನಂತರ ಹಸ್ತಾಂತರಿಸಲಾಯಿತು. ಸಿಬಿಐ ತನಿಖೆಯಲ್ಲಿ ನಂಬಿಯವರ ಮೇಲಿನ ಆರೋಪಗಳು ಸಂಪೂರ್ಣ ಕಪೋಲಕಲ್ಪಿತ ಎಂದು ಕಂಡುಬಂತು. ಇದಾದಮೇಲೆ ಈ ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲನ್ನೂ ಹತ್ತಿತು. ಆದರೆ 1998 ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿ ತೀರ್ಪು ನೀಡಿತು. ಆ ಬಳಿಕ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಂಬಿ ನಾರಾಯಣನ್ ಅವರ ವೃತ್ತಿ ಜೀವನಕ್ಕೆ ಅನ್ಯಾಯವಾಗಿ ಕಲ್ಲು ಹಾಕಿದ್ದಕ್ಕಾಗಿ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶ ನೀಡಿತು. ಕೇರಳ ಸರ್ಕಾರ ನಂಬಿಯವರಿಗೆ 10 ಲಕ್ಷ ರೂ. ಪರಿಹಾರ ಕೊಡುವಂತೆ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಅದು ಹೇಳಿತ್ತು. ಅಲ್ಲಿಗೆ ನಂಬಿ ನಾರಾಯಣನ್ ನಿರ್ದೋಷಿ ಎಂಬುದು ಸಂಪೂರ್ಣ ಸಾಬೀತಾಗಿತ್ತು. ಆದರೆ ನಂಬಿಯವರ ಜೀವನ, ಉಳಿದ ಹದಿಮೂರು ವರ್ಷದ ಇಸ್ರೋ ಸೇವೆ ಹಾಳಾಯಿತು.
ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಐಬಿಯ ಮುಖ್ಯಸ್ಥರಾಗಿದ್ದ ಆರ್.ಬಿ.ಶ್ರೀಕುಮಾರ್. ಈತ ಅದಕ್ಕೂ ಮುನ್ನ ಗುಜರಾತಿನ ಡಿಜಿಪಿಯಾಗಿದ್ದರು. ಗೋಧ್ರೋತ್ತರ ಗಲಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಇತ್ತೆಂದು ಆರೋಪಿಸಿದವರಲ್ಲಿ ಅವರೂ ಒಬ್ಬರು. ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕಾ ಬಲೆಗೆ ಬೀಳಿಸಲು ಕುಮಾರ್ ಜೊತೆ `ಶ್ರಮಿಸಿದ’ ಇನ್ನೊಬ್ಬರೆಂದರೆ ಐಬಿಯ ಜಂಟಿ ನಿರ್ದೇಶಕ ಮ್ಯಾಥ್ಯೂ ಜಾನ್. ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ 1999 ರಲ್ಲಿ ಸಲ್ಲಿಸಿದ ಪರಿಹಾರ ಕುರಿತ ಅರ್ಜಿಯಲ್ಲಿ ನಂಬಿ ನಾರಾಯಣನ್ ಇವರಿಬ್ಬರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಸಿಬಿಐ ಕೂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸಿನಲ್ಲಿ ಈ ಇಬ್ಬರು ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಷರಾ ಬರೆದಿತ್ತು.
ಭಾರತ ತನ್ನದೇ ಆದ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಬಾರದೆಂದೇ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತ್ತು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸಲೆಂದೇ ಬೇಹುಗಾರಿಕಾ ಪ್ರಕರಣವನ್ನು ಸೃಷ್ಟಿಸಲಾಯಿತು ಎಂದು ನಂಬಿ ನಾರಾಯಣನ್ ದುಃಖದಿಂದ ಹೇಳುತ್ತಾರೆ.
ಕ್ರಯೋಜೆನಿಕ್ ತಂತ್ರಜ್ಞಾನ ಪೂರೈಕೆಗೆ ಭಾರತ ಅವಲಂಬಿಸಿದ್ದು ರಷ್ಯಾ, ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳನ್ನು. ಕ್ರಯೋಜೆನಿಕ್ ತಂತ್ರಜ್ಞಾನ ಪೂರೈಕೆಗೆ ಹಿಂದಿನ ಸೋವಿಯತ್ ಒಕ್ಕೂಟದ (ಯುಎಸ್ಎಸ್ಆರ್) ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಆದರೆ ಸೋವಿಯತ್ ಒಕ್ಕೂಟದ ಪತನದ ನಂತರ ಆ ಒಪ್ಪಂದ ಜಾರಿಗೆ ಬರದಂತೆ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತು. ಅಣ್ವಸ್ತ್ರಗಳನ್ನು ಹೊಂದಿದ ಭಾರತ ತನ್ನ ಖಂಡಾಂತರ ಕ್ಷಿಪಣಿಗಳಿಗೆ ಕ್ರಯೋಜೆನಿಕ್ ಎಂಜಿನ್ ಬಳಸಬಹುದೆಂಬ ಭೀತಿ ಅಮೆರಿಕೆಗೆ-----. ಹೀಗಾಗಿ ಕ್ರಯೋಜೆನಿಕ್ ತಂತ್ರಜ್ಞಾನ ದೊರಕದೆ ಇಸ್ರೋ ಚಿಂತೆಗೀಡಾಗಿ-ಪರದಾಡಿದ್ದು ಅಷ್ಟಿಷ್ಟಲ್ಲ. ಆದರೆ 2 ದಶಕಗಳ (೨೦ವರ್ಷ) ಸತತ ಪರಿಶ್ರಮ, ಪ್ರಯೋಗಗಳ ಫಲವಾಗಿ ಆ ತಂತ್ರಜ್ಞಾನವನ್ನು ಭಾರತವೇ ಈಗ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದೆ. ಬಹುಶಃ ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸದೇ ಇದ್ದಿದ್ದರೆ ಇಸ್ರೋ ಈಗಿನ ಸಾಧನೆಯನ್ನು ಇನ್ನೂ ಹತ್ತು ವರ್ಷ ಮುಂಚೆಯೇ ಸಾಧಿಸಬಹುದಿತ್ತು.
ಭಾರತ ಉಪಗ್ರಹಗಳನ್ನು ಉಡಾವಣೆ ಮಾಡಲು ಇದುವರೆಗೆ ಅವಲಂಬಿಸಿದ್ದು ಪಿಎಸ್ಎಲ್ವಿ ರಾಕೆಟ್ಗಳನ್ನು. ಆದರೆ ಇದರಿಂದ ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಭಾರದ ಉಪಗ್ರಹಗಳನ್ನು ಕಳುಹಿಸಲು 500 ಕೋಟಿ ರೂ. ಹಣ ತೆತ್ತು ವಿದೇಶಿ ರಾಕೆಟ್ಗಳ ನೆರವು ಪಡೆಯಬೇಕಾಗಿತ್ತು. ಆದರೀಗ ಕ್ರಯೋಜೆನಿಕ್ ತಂತ್ರಜ್ಞಾನದಿಂದಾಗಿ ;ಇನ್ನು ಮುಂದೆ 2000 ದಿಂದ 4000 ಟನ್ ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಬಹುದಾಗಿದೆ.[೩] </ref>
ನಂಬಿ ನಾರಾಯಣನ್ ಅವರ ಪರಿಶ್ರಮದಿಂದಾಗಿ ಭಾರತ ಈಗ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿರುವುದು ಹೆಗ್ಗಳಿಕೆಯ ವಿಚಾರ. ಅಣುಬಾಂಬನ್ನು ದೂರ ಸಾಗಿಸಲು ಈ ತಂತ್ರಜ್ಞಾನ ಅಗತ್ಯ. ಆದರೆ ಈ ತಂತ್ರಜ್ಞಾನವನ್ನು ಉತ್ತಮ ಉದ್ದೇಶಗಳಿಗೆ ಹೇಗೆ ಬಳಸಬಹುದು ಎಂಬುದನ್ನು ಭಾರತ ಈಗ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ, ಕಡಿಮೆ ವೆಚ್ಚದಲ್ಲಿ ಅದನ್ನು ಹೇಗೆ ಸಾಧಿಸಬಹುದು ಎಂಬುದಕ್ಕೂ ಭಾರತವೇ ಈಗ ಮೇಲ್ಪಂಕ್ತಿ. ಬಲಿಷ್ಠ ದೇಶಗಳ ತಂತ್ರಜ್ಞಾನದ ಏಕಸ್ವಾಮ್ಯವನ್ನು ಭಾರತ ಮುರಿದಿರುವುದಂತೂ ನಿಜ. ಹೇರಳವಾದ ವಿದೇಶೀ ವಿನಿಮಯದ ಉಳಿತಾಯವೂ ಅಗಿದೆ. ಬೇರೆ ದೇಶಗಳ ಉಪಗ್ರಹ ಉಡಾವಣೆ ಮಾಡುವುದರಿಂದ ವಿದೇಶೀ ಹಣದ ಸಂಪಾದನೆಯೂ ಆಗುವುದು.
ವಿಕ್ರಮ್ ಸಾರಾಭಾಯ್, ಸತೀಶ್ ಧವನ್ ಹಾಗೂ ಯು.ಆರ್.ರಾವ್ ಅವರಂಥ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಹುದಾದ ನಂಬಿ ನಾರಾಯಣನ್ ಈ ಕ್ರಯೋಜೆನಿಕ್ ತಂತ್ರಜ್ಞಾನದ ಯಶಸ್ವಿ ಉಡಾವಣೆಯಿಂದ ಸಂತಸಗೊಂಡರೂ ತಮ್ಮ ಅಮೂಲ್ಯ ಜೀವನದ ಸದುಪಯೋಗ ಹಾಳಾದುದನ್ನು ನೆನೆದು ದುಃಖಿಸುತ್ತಾರೆ.[೪]