ಕುಂಕುಮಹಿಂದೂಧರ್ಮ ಹಿಂದೂ ಧರ್ಮದವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಕುಂಕುಮ ಪುಡಿಯನ್ನು ಬಳಸುತ್ತಾರೆ. ಅದನ್ನು ಅರಿಷಿಣ ಅಥವಾ ಖಾವಿಯಿಂದ ತಯಾರಿಸಲಾಗುತ್ತದೆ. ಅರಸಿನ ಕೊಂಬುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಸ್ವಲ್ಪ ನೀರೂಡಿಸಿದ ಸುಣ್ಣ ಬೆರೆಸಿದಾಗ ಗಾಢ ಹಳದಿ ಬಣ್ಣದ ಪುಡಿಯು ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
ಭಾರತದಲ್ಲಿ ಇದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಕುಂಕುಮ ( ಸಂಸ್ಕೃತ ) कुङ्कुमम्), kunku (ಕುಂಕು(ಮರಾಠಿ) कुंकू), ಕುಂಕುಮ್(ಬೆಂಗಾಲಿ) কুমকুম, Hindi), ಕುಂಕುಮಮ್(ತಮಿಳ್) குங்குமம்), ಕುಂಕುಮ (ತೆಲುಗು) కుంకుమ, ಕುಂಗಕುಂಮ್(ಮಳಾಯಾಳಿ) കുങ്കുമം).
ಕುಂಕುಮವನ್ನು ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ(ರಾಜಯೋಗ) ಅಭ್ಯಾಸದಲ್ಲಿ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ. ಬೆನ್ನುಮೂಳೆಯ ಮೂಲದಿಂದ (ಬಾಲ) ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿಕೇಂದ್ರಗಳಲ್ಲಿ ಆರನೆಯ ಚಕ್ರವು (ಹಣೆಯ ಮೇಲಿನ )ಮೂರನೆಯ ಕಣ್ಣು ಎಂದೂ ಹೇಳುವುದುಂಟು. ಇದು ಕಣ್ಣುಗಳ ಹುಬ್ಬುಗಳ ನಡುವೆ ಇರುವ ಬಿಂದು. ಈ ಬಿಂದುವಿನ ಮೂಲಕ ಮಾನವ ಆಧ್ಯಾತ್ಮಿಕವಾಗಿ ದೈವಿಕತೆಗೆ ತೆರೆಯುವ ಸ್ಥಳ ಎಂದೂ ನಂಬಲಾಗಿದೆ. [೧]. ಆದ್ದರಿಂದ ಕುಂಕುಮವನ್ನು ದೇಹದ ಅತ್ಯಂತ ಪವಿತ್ರವಾದ ಸ್ಥಳದಲ್ಲಿ ಇಡಲಾಗಿದೆ ಎಂದು ಹಿಂದುಗಳು ನಂಬುತ್ತಾರೆ.
ಹಣೆಯಲ್ಲಿ ಕುಂಕುಮವನ್ನು ಬೇರೆ ಬೇರೆ ಗುರುತುಗಳೊಂದಿಗೆ ಇಡುವ ರೀತಿಗಳು-
ಶೈವರು : ಶಿವನ ಆರಾಧಕರು ಸಾಮಾನ್ಯವಾಗಿ ಮೂರು ವೀಭೂತಿ ಪಟ್ಟೆಗಳನ್ನು ಅಡ್ದಲಾಗಿ ಎಳೆದು ಅದರ ಮಧ್ಯದಲ್ಲಿ ಕುಂಕುಮವನ್ನು ಗುಂಡಾಗಿ ಇಡುತ್ತಾರೆ. [೧]
ವೈಷ್ಣವರು : ವಿಷ್ಣುವಿನ ಆರಾಧಕರು ಎರಡು ಬಿಳಿಯ ನಾಮಗಳನ್ನು ಕೊಂಬಿನಾಕಾರದಲ್ಲಿ ಬರೆದು ಮಧ್ಯದಲ್ಲಿ ಕೆಂಪಾದ ಗೆರೆ ಎಳೆದುಕೊಳ್ಳುತ್ತಾರೆ. ಕೆಂಪುಗೆರೆಯನ್ನು ಕುಂಕುಮವನ್ನು ನೀರಿನಲ್ಲಿ ಬೆರೆಸಿ ಎಳೆದುಕೊಳ್ಳುತ್ತಾರೆ. ಬಿಳಿಯ ನಾಮಗಳನ್ನು U ಆಕಾರದಲ್ಲಿ ಬರೆದುಕೊಳ್ಳುವ ಪದ್ದತಿಯೂ ಹಲವರಲ್ಲಿ ಇದೆ. [೧]
ಸ್ವಾಮಿನಾರಾಯಣ ಅನುಯಾಯಿಗಳು ಕುಂಕುಮವನ್ನು ಕೊಂಬಿನಾಕಾರದಲ್ಲಿ ತಿಲಕದ ಮಧ್ಯದಲ್ಲಿ ಹಣೆಯ ಮಧ್ಯದಲ್ಲಿ ಇರುವಂತೆ ಇಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ತಿಲಕವು ಹಳದಿಯಾಗಿದ್ದು ಶ್ರೀಗಂಧದಿಂದ ತಯಾರಿಸಿರುತ್ತಾರೆ. [೨]
ವೈಷ್ಣವ ಸಂಪ್ರದಾಯದಲ್ಲಿ ಬಿಳಿಯ ಗೆರೆಗಳು ಅವರ ಭಗವಂತನ ಪಾದಮುದ್ರೆಗಳನ್ನು ಪ್ರತಿನಿಧಿಸುತ್ತವೆ. ಕೆಂಪುಗೆರೆಯು ದೇವಿ ಲಕ್ಷ್ಮಿಯನ್ನು ಪ್ರತಿನಿಧಿಸುತ್ತವೆ. [೧] ಸ್ವಾಮಿನಾರಾಯಣ ಸಂಪ್ರದಾಯದಲ್ಲಿ ಹಳದಿ ಬಣ್ಣದ U ಆಕಾರದ ತಿಲಕವು ಪರಮಾತ್ಮನ ಪಾದಪದ್ಮಗಳನ್ನು ಮತ್ತು ಕುಂಕುಮವು ಭಕ್ತನನ್ನು ಪ್ರತಿನಿಧಿಸುತ್ತವೆ.[೨] ಎರಡೂ ಸಂಪ್ರದಾಯಗಳಲ್ಲೂ ಹಣೆಯಲ್ಲಿ ಧರಿಸಿದ ಗುರುತುಗಳು ಭಕ್ತನು ಭಗವಂತನ ಪಾದಗಳಲ್ಲಿ ಸದಾ ಸೇವಕನಾಗಿರಬೇಕೆಂದು ನೆನೆಪಿಸುತ್ತವೆ.
ನಿರಂತರವಾಗಿ ದೈವೀಶಕ್ತಿಯನ್ನು ಮತ್ತು ದೈವೀ ಭಾವನೆಯನ್ನು ಹೊರ ಸೂಸುವ ಗುಣದಿಂದಾಗಿ ಅಧ್ಯಾತ್ಮಿಕ ಮಹತ್ವವನ್ನು ಗಳಿಸಿದೆ. ಕುಂಕುಮವನ್ನು ಅರಸಿನದಿಂದ ತಯಾರಿಸುವುದರಿಂದ ಇದರಲ್ಲಿ ಬಹುಪಾಲು ಭೂಮಾತೆಯ ಸ್ಪಂದನಗಳು ಇದರಲ್ಲೂ ಅರಸಿನದಂತೆಯೇ ಇರುತ್ತವೆ. ಇದು ಕೆಂಪು ಬಣ್ಣ ಹೊಂದಿರುವುದರಿಂದ ದೇವಿ ದುರ್ಗೆಯನ್ನು ಹೆಚ್ಚು ಆಕರ್ಶಿಸುವ ಶಕ್ತಿಯನ್ನು ಹೊಂದಿದೆ.
ಕುಂಕುಮದಲ್ಲಿರುವ ದೈವೀ ಶಕ್ತಿ ಇರುವುದರಿಂದ ಅದು ಆರಾಧಕನ ಸೂಕ್ಷ್ಮ ಶರೀರವನ್ನು ಮತ್ತು ಮನಸ್ಸನ್ನು ಪರಿಶುದ್ಧ ಗೊಳಿಸುತ್ತದೆ. ಇದನ್ನು ಹಣೆಯಲ್ಲಿ ಧರಿಸುವುದರಿಂದ ಅರಾಧಕನನ್ನು ಯಾವುದೇ ಋಣಾತ್ಮಕ ಶಕ್ತಿಗಳು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. [೩]
ಮನೆಗೆ ಹೆಣ್ಣು ಮಗು ಅಥವಾ ಮದುವೆಯಾದ ಮಹಿಳೆ ಬಂದರೆ ಅವರಿಗೆ ಕುಂಕುಮ ನೀಡುವುದು ( ಹಿರಿಯ ಮಹಿಳೆಗೆ) ಒಂದು ಗೌರವದ ಸಂಕೇತ. ಅದೇ ಹೆಣ್ಣುಮಗಳಾದರೆ ಅದು ಆಶೀರ್ವಾದ ಸೂಚಕವಾಗಿ ಮನೆಯಿಂದ ಹೊರಡುವಾಗಿ ನೀಡುತ್ತಾರೆ. ಆದರೆ ವಿಧವೆಯರಿಗೆ ಕುಂಕುಮ ವನ್ನು ನೀಡುವುದಿಲ್ಲ. ದಕ್ಷಿಣ ಭಾರತದಲ್ಲಿ ಮದುವೆಯಾದ ಹೆಂಗಸರು ದೇವಸ್ಥ್ಹಾನಕ್ಕೆ ಹೋಗುವಾಗ, ಸಾಮಾನ್ಯವಾಗಿ ತಮ್ಮ ಉಂಗುರದ ಬೆರಳನ್ನು ಹಳದಿ ಬಣ್ಣದ ಅರಸಿನ ಪುಡಿಯಲ್ಲಿ ಅದ್ದಿ ತಮ್ಮ ಕಂಠದ ಭಾಗದಲ್ಲಿ ಬೊಟ್ಟನ್ನು ಇಟ್ಟುಕೊಳ್ಳ್ದುತ್ತಾರೆ.
ಗಂಡಸರು, ಹೆಂಗಸರು, ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಹಣೆಯಲ್ಲಿ ಕುಂಕುಮದ ಬೊಟ್ಟನ್ನು ಇಟ್ಟುಕೊಳ್ಳ್ದುತ್ತಾರೆ. ಅಲ್ಲದೆ ದೇವಸ್ಥಾನಕ್ಕೆ ಹೋದಾಗ ಪೂಜೆಯ ಸಮಯದಲ್ಲಿ ಕುಂಕುಮದ ಬೊಟ್ಟನ್ನು ಇಟ್ಟುಕೊಳ್ಳುತ್ತಾರೆ. ಭಾರತದ ಬಹುಪಾಲು ಪ್ರದೇಶಗಳಲ್ಲಿ ವಿವಾಹಿತ ಮಹಿಳೆಯರು ಪ್ರತಿ ದಿನ ತಮ್ಮ ತಲೆಯ ಬೈತಲೆಯ ಭಾಗದಲ್ಲಿ ಕುಂಕುಮವನ್ನು ಇಟ್ಟುಕೊಳ್ಳುತ್ತಾರೆ. ಇದನ್ನು ಹಿಂದಿಯಲ್ಲಿ ಸಿಂದೂರ ಎಂದು ಕರೆಯುತ್ತಾರೆ.
ಹಿಂದೂ ದೇವಸ್ಥಾನಗಳಲ್ಲಿ ಕುಂಕುಮವನ್ನು ರಾಶಿ ರಾಶಿಯಾಗಿ ಇಟ್ಟಿರುತ್ತಾರೆ. ಜನ ತಮ್ಮ ಹೆಬ್ಬೆರಳನ್ನು ಕುಂಕುಮದಲ್ಲಿ ಅದ್ದಿ ಹಣೆಯ ಮೇಲೆ ಉದ್ದದ ನಾಮದ ರೀತಿಯಲ್ಲಿ ಉದ್ದವಾಗಿ ಎಳೆದು ಕೊಳ್ಳುವ ಪದ್ಧತಿ ಯೂ ಕೆಲವು ಕಡೆ ಇದೆ. ಕೆಲಕಡೆ ತಮ್ಮ ಕಣ್ಣಿನ ಹುಬ್ಬುಗಳ ನಡುವೆ ಗುಂಡಾಗಿ ಇಟ್ಟುಕೊಳ್ಳ್ದುವ ಪರಿಪಾಟವೂ ಸಹ ಇದೆ.
ವಿಧವೆಯರು ಕುಕುಮವನ್ನು ಏಕೆ ಧರಿಸಬಾರದು ಎಂಬುದಕ್ಕೆ ಶಾಸ್ತ್ರಗಳು ನೀಡುವ ಕಾರಣವೆಂದರೆ- ವಿಧವೆಯ ಗಂಡನ ಸೂಕ್ಷ್ಮ ಶರೀರದ ಮರಣೋತ್ತರ ಪ್ರಯಾಣಕ್ಕೆ ತೊಡಕುಂಟಾಗುತ್ತದೆ. ಗಂಡನ ಮರಣಾ ನಂತರ ಆತನ ಹೆಂಡತಿ ಹಣೆಯಲ್ಲಿ ಕುಂಕುಮವನ್ನು ಧರಿಸುವಾಗ ಆಕೆಯು ತನ್ನ ಗಂಡನನ್ನು ನೆನೆಸಿಕೊಳ್ಳುತ್ತಾಳೆ. ಇದರಿಂದ ಆಕೆಯ ಗಂಡನ ಶರೀರವು ಮತ್ತೆ ಭೂಲೋಕಕ್ಕೆ ಬರುವ ಅನಿವಾರ್ಯ ಸನ್ನಿವೇಶವುಂಟಾಗಬಹುದು ಎಂದು ನಂಬಲಾಗಿದೆ.
ಮಾಯೆಯ ಮೋಹದಿಂದ ಬಿಡುಗಡೆ ಹೊಂದಲು ಮಹಿಳೆಯು ತನ್ನ ಗಂಡನ ಮರಣಾ ನಂತರ ತನ್ನಲ್ಲಿದ್ದ ಮೋಹದ ಭಾವವದಿಂದ ಬಿಡುಗಡೆ ಪಡೆಯುವ ಕಡೆ ತನ್ನ ಪ್ರಜ್ಞೆಯನ್ನು ಎಚ್ಚರಿಸಿಕೊಳ್ಳುವ ಸಲುವಾಗಿ, ಮುತ್ತೈದೆಯ ಭಾಗ್ಯಗಳಾದ ಆಭರಣಗಳನ್ನು ಮತ್ತು ಕುಂಕುಮಧಾರಣೆಯನ್ನು ತ್ಯಜಿಸುವುದರಿಂದ, ಆಕೆ ತನ್ನ ಮನಸ್ಸನ್ನು ಭಗವಂತನ ಕಡೆ ತಿರುಗಿಸುವುದಕ್ಕೆ ಪ್ರಯತ್ನಿಸಲು ಸಹಾಯಕಾರಿಯಾಗುತ್ತದೆ. [೩]
ಕುಂಕುಮವನ್ನು ಕೆಲ ಕೃತಕ ರಾಸಾಯನಿಕ ವಸ್ತುಗಳಿಂದ ತಯಾರಿಸಬಹುದು. ಆದರೆ ಕುಂಕುಮವನ್ನು ಪ್ರತಿ ದಿನ ಚರ್ಮದ ಮೇಲೆ ಹಚ್ಚುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಆಗುವ ಸಾಧ್ಯತೆ ಇರುತ್ತದೆ. ಅರಸಿನವನ್ನು ಕ್ಷಾರದ ಜೊತೆ ಸಂಯೋಗ ಮಾಡಿ ಕುಂಕುಮವನ್ನು ತಯಾರಿಸುವುದುಂಟು. ಆದರೆ ಕಾವಿಯನ್ನು ಕುಂಕುಮವನ್ನು ತಯಾರಿಸಲು ಬಳಸುವುದಿಲ್ಲ. ಏಕೆಂದರೆ ಅದು ಬಹಳ ದುಬಾರಿ ವಸ್ತುವಾಗಿದೆ. ಅಲ್ಲದೆ ಖಾವಿಯು ವ್ಯಾಪಾರಕ್ಕೆ ಬಳಸುವ ಕೆಂಪು ಬಣ್ಣವನ್ನು ಕೊಡುವುದಿಲ್ಲ. ಅದೇನಿದ್ದರೂ ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ನೀಡುತ್ತದೆ.
ಕುಂಕುಮವನ್ನು ಹಿಂದೂ ದೇವತೆಗಳ ಆರಾಧನೆಯಲ್ಲಿ ವಿಪುಲವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಶಕ್ತಿ ದೇವತೆ ಮತ್ತು ಲಕ್ಷ್ಮಿ ಪೂಜೆಯಲ್ಲಿ ಇದನ್ನು ಬಳಸಲಾಗುತ್ತದೆ. ಕುಂಕುಮವನ್ನು ವಸಂತ ಹಬ್ಬವಾದ 'ಹೋಲಿ ಹಬ್ಬ'ದಲ್ಲಿ ಇತರ ಪದಾರ್ಥಗಳೊಂದಿಗೆ ಬೆರೆಸಿ ಗಾಳಿಯಲ್ಲಿ ಎಸೆಯ ಲಾಗುತ್ತದೆ.
↑ ೧.೦೧.೧೧.೨೧.೩Huyler, Steven. "The Experience: Approaching God". In The Life of Hinduism, ed. Vasudha Narayanan and John Stratton Hawley. Los Angeles: University of California Press, 2006.