ಅವರು ಏಪ್ರಿಲ್ 12 1873 ರಂದು ತಿರುವನಂತಪುರಮ್ ಜಿಲ್ಲೆಯ ಕಯಿಕ್ಕರ ಹಳ್ಳಿಯಲ್ಲಿ ಜನಿಸಿದ. ಚಿತ್ರಾಪೌರ್ಣಿಮೆಯಂದು ನಾರಾಯಣನ್ ಎಂಬವರ ಮಗನಾಗಿ ಕಾಯಿಕ್ಕರ ಎಂಬ ಸ್ಥಳದಲ್ಲಿ ಆಶಾನ್ ಹುಟ್ಟಿದ. ಹದಿನೆಂಟನೆಯ ವಯಸ್ಸಿನಲ್ಲಿ ನಾರಾಯಣ ಗುರುವನ್ನು ಭೇಟಿಮಾಡಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಬಂದು (1895) ಆಶಾನ್ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಗುರು ಇವನನ್ನು ಪ್ರೀತಿಯಿಂದ ಕುಮಾರು ಎಂದು ಕರೆಯುತಿದ್ದರು. 1898 ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ ಮಾಡಿ ಅಲ್ಲಿ ಆಶಾನ್ ವಿದ್ಯಾಭ್ಯಾಸ ಪಡೆದ.[೧]
ಸೌಂದರ್ಯಲಹರಿ (1901), ಶಿವಸ್ತೋತ್ರ ಮಾಲ (1902), ಮೇಘಸಂದೇಶ (1902), ವಿಚಿತ್ರವಿಜಯ (1902), ಪ್ರಬೋಧ ಚಂದ್ರೋದಯ, ಮೊದಲಾದವು ಆಶಾನ್ ಕವಿಯ ಅನುವಾದ ಕೃತಿಗಳು. 1908 ರಲ್ಲಿ ವೀಣ ಪೂ ಪ್ರಕಟವಾದೊಡನೆ ಈತನ ಹೆಸರು ಮಲಯಾಳ ಕವಿಗಳ ಅಗ್ರಪಂಕ್ತ್ತಿ ಸೇರಿತು. ತರುವಾಯದಲ್ಲಿ ನಳಿನಿ (1910), ಲೀಲ (1913) ಶ್ರೀಬುದ್ಧಚರಿತಂ (1914), ಬಾಲರಾಮಾಯಣಂ-ಮೂರು ಭಾಗಗಳು (1915), ಗ್ರಾಮವೃಕ್ಷತ್ತಿಲೆ ಕುಯಿಲ್ (1918), ಪ್ರರೋಧನ (1918), ಚಿಂತಾವಿಷ್ಟೆಯಾಯಿ ಸೀತಾ (1919) ಪುಷ್ಪವಾಟಿ(1919), ದುರವಸ್ಥ (1922), ಚಂಡಾಲ ಭಿಕ್ಷುಕಿ (1923), ಅರುಣ (1923)- ಮೊದಲಾದ ಅತ್ಯುತ್ತಮ ಕೃತಿಗಳನ್ನು ರಚಿಸಿ ರಮ್ಯ ಕವಿಗಳ ಸಾಲಿನಲ್ಲಿ ಆಶಾನ್ ಶಾಶ್ವತ ಸ್ಥಾನ ಪಡೆದಿದ್ದಾರೆ.[೨]
ಆಶಾನ್ ಕವಿಯ ಕೃತಿಗಳನ್ನು ಓದದೆ ಮಲೆಯಾಳ ಕಾವ್ಯವನ್ನು ಓದಿದಂತಾಗುವುದಿಲ್ಲ. ಇವರಸ್ನೇಹಸಂದೇಶವನ್ನೂ ವಿಶ್ವವಿಶಾಲವಾದ ಮನೋಧರ್ಮವನ್ನೂ ಮೃದುಮಧುರ ಭಾವಗಳನ್ನೂ ತಿಳಿದುಕೊಳ್ಳುವ ಸಲುವಾಗಿಯಾದರೂ ಮಲಯಾಳ ಕವಿತೆಯನ್ನು ಅಧ್ಯಯನ ಮಾಡಬೇಕು. ಇವರ ಕವಿತಾ ಪ್ರತಿಭೆಯನ್ನು ಕಂಡು 1922 ರಲ್ಲಿ ಪ್ರಿನ್ಸ್ ಆಫ್ ವೇಲ್ಸ್ ರೇಷ್ಮೆ ಶಾಲನ್ನೂ ಚಿನ್ನದ ಕಡಗವನ್ನೂ ಕೊಟ್ಟು ಸನ್ಮಾನಿಸಿದರು. 1923 ರಲ್ಲಿ ಆಶಾನ್ ರವೀಂದ್ರನಾಥ ಠಾಕೂರರನ್ನು ಭೇಟಿಯಾಗಿದ್ದ. ಐವತ್ತೊಂದು ವರ್ಷಗಳು ಬಾಳಿದ ಆಶಾನ್ ಮಲಯಾಳದ ಅತ್ಯಂತ ಜನಪ್ರಿಯ ಕವಿಯಾಗಿದ್ದಾನೆ. ಮಲಯಾಳ ಭಾಷೆಯ ರಮ್ಯ ಕಾವ್ಯ ಸತ್ವವನ್ನು ಪಾಕವಿಳಿಸುವುದರಲ್ಲಿ ಇವರ ಶ್ರಮ ಅನನ್ಯವಾದುದು.[೩][೪][೫]