ಕೆ. ವೆಂಕಟಲಕ್ಷಮ್ಮ | |
---|---|
ಜನನ | ಮೇ ೨೯, ೧೯೦೬ ಕಡೂರಿನ ತಂಗಲ ತಾಂಡ್ಯ |
ಸಾವು | ಜುಲೈ ೨, ೨೦೦೨ |
ಶಿಕ್ಷಣ | ಭರತನಾಟ್ಯ ಕಲಾವಿದರು |
ಡಾ. ಕೆ. ವೆಂಕಟಲಕ್ಷ್ಮಮ್ಮನವರು (ಮೇ ೨೯, ೧೯೦೬ - ಜುಲೈ ೨, ೨೦೦೨) ಮೈಸೂರು ಶೈಲಿಯ ಭರತನಾಟ್ಯದಲ್ಲಿ ವಿಶ್ವಪ್ರಸಿದ್ಧಿ ಪಡೆದವರು.
ಮೈಸೂರು ಶೈಲಿಯ ಭರತನಾಟ್ಯ ಪ್ರವರ್ತಕರಲ್ಲೊಬ್ಬರಾದ ವೆಂಕಟಲಕ್ಷ್ಮಮ್ಮನವರು ಮೇ ೨೯, ೧೯೦೬ರಂದು ಕಡೂರಿನ 'ತಂಗಲ ತಾಂಡ್ಯ'ದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡದ್ದರಿಂದ ಅಜ್ಜ, ರಾಮನಾಯಕ ಮತ್ತು ಅಜ್ಜಿಯ ಪೋಷಣೆಯಲ್ಲಿ ಬದುಕು ನಡೆಸಿದರು. ಪ್ರಸಿದ್ಧ ಸಂಸ್ಕೃತ ಉಪಾಧ್ಯಾಯರಾದ 'ಅನಂತ ಜೋಶಿ'ಯವರ ಸಲಹೆಯಂತೆ ಅವರು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದರು. ಎಂಟನೆಯ ತರಗತಿಯವರೆಗೆ ಓದಿದ್ದರು.
ವೆಂಕಟಲಕ್ಷಮ್ಮನವರು ಒಂಬತ್ತನೆಯ ವಯಸ್ಸಿನಲ್ಲಿಯೇ ಮೈಸೂರಿನ ನಾಟ್ಯ ಸರಸ್ವತಿ ಎನಿಸಿದ್ದ 'ಜಟ್ಟಿ ತಾಯಮ್ಮ'ನವರ ಬಳಿ ಭರತನಾಟ್ಯ ತರಬೇತಿ ಪಡೆಯಲಾರಂಭಿಸಿದರು. 'ಬಿಡಾರಂ ಕೃಷ್ಣಪ್ಪ 'ಮತ್ತು ಅವರ ಶಿಷ್ಯರಾದ 'ಬಿ. ದೇವೇಂದ್ರಪ್ಪ'ನವರಿಂದ ಶಾಸ್ತ್ರೀಯ ಸಂಗೀತ ಕಲಿತರು.
೧೮೧೧ ರಿಂದ ೧೮೬೯ ರವರೆಗೆ ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭರತನಾಟ್ಯದಲ್ಲಿ ‘ಮೈಸೂರಿನದೇ ವಿಶೇಷ ಶೈಲಿ’ ಎಂದು ಪ್ರಸಿದ್ಧಿ ಪಡೆದಿತ್ತು. ನಟುವಾಂಗ ವಾದ್ಯ ಪ್ರದಕ್ಷಿಣೆ, ಸಭಾಪೂಜೆ, ಪ್ರಭು ಪ್ರಶಂಸೆ, ನಂತರ ಕಲಾವಿದೆಯಿಂದ ಪುಷ್ಪಾಂಜಲಿ, ಹಯಗ್ರೀವ ಸ್ತುತಿ, ಸ್ವರಜತಿ, ವರ್ಣ, ಶಬ್ದ, ತಿಲ್ಲಾನಗಳ ಬಳಿಕ ಶ್ಲೋಕ, ಪಂಚಕ, ಪದ, ಜಾವಳಿ ಪ್ರದರ್ಶನ ಮುಂತಾದವುಗಳು ಮೈಸೂರಿನ ಶೈಲಿಯ ವೈಶಿಷ್ಟ್ಯವೆನಿಸಿದ್ದವು. ರಸಾಭಿನಯವೇ ಮೈಸೂರು ಶೈಲಿಯ ಹೆಗ್ಗಳಿಕೆ. ಕನ್ನಡ ಜಾವಳಿಗಳಿಗೆ ವೆಂಕಟಲಕ್ಷ್ಮಮ್ಮನವರು ಅಭಿನಯಿಸುತ್ತಿದ್ದ ರೀತಿ ಚಿರಸ್ಮರಣೀಯವೆನಿಸಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರಕಾಲದಲ್ಲಿ ಆಸ್ಥಾನ ವಿದುಷಿಯಾಗಿ ೧೯೩೯ರಲ್ಲಿ ನೇಮಕಗೊಂಡ ವೆಂಕಟಲಕ್ಷಮ್ಮನವರು ೩೦ ವರ್ಷ ಆಸ್ಥಾನ ಕಲಾವಿದರಾಗಿ ಕೀರ್ತಿ ಸಂಪಾದಿಸಿದರು. ಅರಮನೆಯ ಚಾಮುಂಡೇಶ್ವರಿ ಉತ್ಸವ, ನವರಾತ್ರಿಯ ಹತ್ತುದಿವಸ ಮತ್ತು ಮಹಾರಾಜರ ವರ್ಧಂತಿ ಉತ್ಸವಗಳಲ್ಲಿ ಅವರ ನೃತ್ಯ ಕಾರ್ಯಕ್ರಮ ಅವಶ್ಯಕವಾಗಿ ಇರುತ್ತಿತ್ತು.
ವೆಂಕಟಲಕ್ಷಮ್ಮನವರು ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗಕ್ಕೆ ರೀಡರ್ ಆಗಿ ನೇಮಕಗೊಂಡಿದ್ದರು. ತಾವೇ ಸ್ಥಾಪಿಸಿದ ಭರತ ಕಲಾ ನಿಕೇತನ ಸಂಸ್ಥೆಯಲ್ಲೂ ಅವರು ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದರು. ಅಮೇರಿಕದ ವಿಶ್ವವಿದ್ಯಾಲಯದಿಂದ ಸಹಾ ವಿದ್ಯಾರ್ಥಿಗಳ ತಂಡಗಳು ಅವರಿಂದ ತರಬೇತಿ ಪಡೆಯಲು ಬರುತ್ತಿದ್ದುದುಂಟು. ೭೦-೮೦ರ ಇಳಿವಯಸ್ಸಿನಲ್ಲಿಯೂ ಅವರು ಹಿನ್ನೆಲೆಗಾಯನಕ್ಕೆ ತಕ್ಕಂತೆ ರಸಾಭಿನಯಗಳ ಮಾರ್ಗದರ್ಶನ ನೀಡುತ್ತಿದ್ದರು. ಭಾರತದ ಬಹಳಷ್ಟು ಪ್ರಸಿದ್ಧ ನೃತ್ಯ ಕಲಾವಿದರು ವೆಂಕಟಲಕ್ಷಮ್ಮನವರ ಬಳಿ ಹೆಚ್ಚಿನ ನೃತ್ಯ ಕಲಿಕೆಗೆ ಮತ್ತು ನೃತ್ಯ ಕಲೆಯ ಸೂಕ್ಷ್ಮತೆಗಳ ಅಧ್ಯಯನಕ್ಕೆ ಬರುತ್ತಿದ್ದುದುಂಟು.
ವೆಂಕಟಲಕ್ಷಮ್ಮನವರಿಗೆ ಹಲವಾರು ಗೌರವ ಪ್ರಶಸ್ತಿಗಳು ಸಂದವು.
ಈ ಮಹಾನ್ ಕಲಾವಿದೆ ವೆಂಕಟಲಕ್ಷಮ್ಮನವರು, ಜುಲೈ ೨, ೨೦೦೨ರ ವರ್ಷದಲ್ಲಿ ಈ ಲೋಕವನ್ನಗಲಿದರು.