ಜವಾಹರ ನವೋದಯ ವಿದ್ಯಾಲಯಗಳು ಭಾರತದ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಉಚಿತ ವಸತಿ ಶಾಲೆಗಳು. ಗ್ರಾಮೀಣ ಪ್ರದೇಶದ ಬುದ್ಡಿವಂತ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಊಟ ಮತ್ತು ವಸತಿಯನ್ನು ಒದಗಿಸಿಕೊಡುವ ಈ ಶಾಲೆಗಳು ಭಾರತದ ಉದ್ದಗಲಕ್ಕೂ ಇವೆ.
1985ರಲ್ಲಿ ಅಂದಿನ ಭಾರತದ ಪ್ರಧಾನಮಂತ್ರಿಯಾಗಿದ್ದ ರಾಜೀವ ಗಾಂಧಿಅವರ ಕನಸಿನ ಕೂಸಾಗಿ ಶುರುವಾದ ಈ ವಿದ್ಯಾಲಯಗಳ ಮುಖ್ಯ ಗುರಿ ಭಾರತದ ಗ್ರಾಮೀಣ ಭಾಗದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಮಾಡುವುದು. ಶುರುವಾದಾಗ ಬರೀ ನವೋದಯ ವಿದ್ಯಾಲಯಗಳಾಗಿದ್ದ ಈ ಶಾಲೆಗಳು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರುರವರ ಜನ್ಮಶತಾಬ್ದಿಯ ವರ್ಷದಲ್ಲಿ 'ಜವಾಹರ ನವೋದಯ ವಿದ್ಯಾಲಯ'ಗಳೆಂದು ಪುನಃನಾಮಕರಣಗೊಂಡವು. ಈಗ ಹೆಚ್ಚೂಕಡಿಮೆ 557 ನವೋದಯ ವಿದ್ಯಾಲಯಗಳು ತಮಿಳುನಾಡು ರಾಜ್ಯವನ್ನುಳಿದು ಭಾರತದೆಲ್ಲೆಡೆ ಇವೆ. ಈ ವಿದ್ಯಾಲಯಗಳು ಜಿಲ್ಲಾಮಟ್ಟದಲ್ಲಿ ನಡೆಯುವ ರಾಷ್ಟ್ರವ್ಯಾಪಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ, ಊಟ ಮತ್ತು ವಸತಿಯನ್ನೊದಗಿಸಿಕೊಡುತ್ತವೆ.
ಆಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಭಾರತದಲ್ಲಿನ ಪ್ರತೀ ಜಿಲ್ಲೆಯಲ್ಲಿನ ೫ನೆ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಜವಾಹರ್ ನವೋದಯ ವಿದ್ಯಾಲಯಗಳಿಗೆ ಪ್ರವೇಶಾವಕಾಶ ಕೊಡಲಾಗುವುದು. ಪ್ರವೇಶ ಪರೀಕ್ಷೆಯ ಪ್ರಶ್ನೆಗಳು ಆಯ್ಕೆ ಆಧಾರಿತ ಹಾಗೂ ಸಾಂಕೇತಿಕವಾಗಿರುತ್ತವೆ. ಇತ್ತೀಚೆಗೆ ೯ನೇ ಮತ್ತು ೧೧ನೇ ತರಗತಿಯ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶಾವಕಾಶ ಕಲ್ಪಿಸಿಕೊಡಲಾಗುತ್ತಿದೆ. ೯ನೇ ಮತ್ತು ೧೧ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ, ಗಣಿತ, ವಿಜ್ಞಾನ ಹಾಗು ಸಮಾಜಜ್ಞಾನ ಆಧರಿತವಾಗಿರುತ್ತದೆ. ವಿದ್ಯಾರ್ಥಿಗಳು ಶಾಲೆ ಬಿಟ್ಟುಹೋದುದರಿಂದ ತೆರವಾದ ಸ್ಥಾನಗಳಿಗೆ ೯ನೇ ಮತ್ತು ೧೧ನೇ ತರಗತಿಯ ಪ್ರವೇಶ ಅವಕಾಶಗಳು ನೀಡಲಾಗುತ್ತದೆ.
ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗುತ್ತದೆ. ಶೇ. ೮೦ರಷ್ಟು ಸ್ಥಾನಗಳನ್ನು ಜಿಲ್ಲೆಯ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿನ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು. ೩ನೇ ೧ರಷ್ಟು ಸ್ಥಾನಗಳನ್ನ ಹೆಣ್ಣುಮಕ್ಕಳಿಗೆ ಮೀಸಲಿಡಲಾಗುತ್ತದೆ.
ಆಯ್ಕೆಯಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ೬ನೇ ತರಗತಿಯಿಂದ ೧೨ನೇ ತರಗತಿಯವರೆಗೆ ಉಚಿತ ವಿದ್ಯಾಭ್ಯಾಸ ನೀಡಲಾಗುವುದು. ವಿದ್ಯಾರ್ಥಿಗಳ ಊಟ, ವಸತಿಗಳನ್ನ ಶಾಲೆ ನೋಡಿಕೊಳ್ಳುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಅವಶ್ಯಕವಾದ ಶಾಲಾ ಸಮವಸ್ತ್ರ, ಪಠ್ಯ-ಪುಸ್ತಕಗಳು, ಪಾದರಕ್ಷೆಗಳು, ದಿನಬಳಕೆಯ ವಸ್ತುಗಳಾದ ಸೋಪ್, ಪೇಷ್ಟ್ ಎಲ್ಲಾ ವಸ್ತುಗಳನ್ನು ಶಾಲೆಯೆ ಒದಗಿಸುತ್ತದೆ.
ಭಾರತ ಸರ್ಕಾರದ ಕೇಂದ್ರೀಯ ಮಾನವ ಸಂಪನ್ಮೂಲ ಆಭಿವೃದ್ಧಿ ಸಚಿವ ಶಾಖೆಯ 'ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ಇಲಾಖೆ'ಯಡಿಯಲ್ಲಿ ಹುಟ್ಟುಹಾಕಲಾಗಿರುವ ನವೋದಯ ವಿದ್ಯಾಲಯ ಸಮಿತಿಯೆಂಬ ಸ್ವಾಯತ್ತ ಸಂಸ್ಥೆ ಎಲ್ಲಾ ನವೋದಯ ವಿದ್ಯಾಲಯಗಳ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.