ಜಾರಿ ನಿರ್ದೇಶನಾಲಯ(Enforcement Directorate - ED) ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾಗಿದ್ದು ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತದೆ. ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದ್ದು ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಒಂದು ಪ್ರಮುಖ ಭಾಗವಾಗಿದೆ. ಭಾರತೀಯ ಆಡಳಿತಾತ್ಮಕ ಸೇವಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗು ಆದಾಯ ತೆರಿಗೆ ಅಧಿಕಾರಿಗಳನ್ನು ಈ ಸಂಸ್ಥೆ ಒಳಗೊಂಡಿರುತ್ತದೆ.
೧೯೫೬ ರ ಮೇ ೧ ನೇ ತಾರೀಕು ಕೇಂದ್ರ ಸರ್ಕಾರ ವಿದೇಶಿ ವಿನಿಮಯ ನಿಯಂತ್ರಣ ಕಾನೂನುಗಳ ಪಾಲನೆಗೆ 'ಜಾರಿ ಘಟಕ' ವನ್ನು ಸ್ಥಾಪಿಸಿತು. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ - ೧೯೪೭ ರ ಸಂಪೂರ್ಣ ಪಾಲನೆಯೇ ಇಲಾಖೆಗೆ ಮುಖ್ಯ ಕರ್ತವ್ಯವಾಗಿತ್ತು. ಮುಂದೆ ೧೯೫೭ ರಲ್ಲಿ ಇದೇ ಘಟಕವನ್ನು 'ಜಾರಿ ನಿರ್ದೇಶನಾಲಯ' ಎಂದು ಮರು ನಾಮಕರಣ ಮಾಡಲಾಯಿತು.
ಆರ್ಥಿಕ ಕಾನೂನಿನ ಎರಡು ಮುಖ್ಯ ಕಾಯಿದೆಗಳಾದ 'ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ - ೧೯೯೯' ಹಾಗು 'ಕಪ್ಪು ಹಣ ಬದಲು ತಡೆ ಕಾಯಿದೆ ೨೦೦೨(ಮನಿ ಲಾಂಡರಿಂಗ್ ತಡೆ ಕಾಯಿದೆ) ಗಳನ್ನು ದೇಶದೊಳಗೆ ಸಮರ್ಥವಾಗಿ ಜಾರಿ ಮಾಡುವುದು ಹಾಗು ಅವು ಎಲ್ಲಿಯೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಜಾರಿ ನಿರ್ದೇಶನಾಲಯದ ಆದ್ಯ ಕರ್ತವ್ಯಗಳಾಗಿವೆ.
ಕಪ್ಪು ಹಣವನ್ನು ಅಕ್ರಮವಾಗಿ ಅಥವಾ ವಾಮ ಮಾರ್ಗದ ಮುಖಾಂತರ ಬಿಳಿಯನ್ನಾಗಿಸುವುದು ಅಪರಾಧವಾಗಿದ್ದು ಇಂತಹ ಅಪರಾಧಗಳು ನೇರವಾಗಿ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರಲಿವೆ.
ಜಾರಿ ನಿರ್ದೇಶನಾಲಯದ ಕೇಂದ್ರ ಕಛೇರಿ ನವದೆಹಲಿಯಲ್ಲಿದ್ದು ಜಾರಿ ನಿರ್ದೇಶಕರು ಇದರ ಮುಖ್ಯಸ್ಥರಾಗಿರುತ್ತಾರೆ. ಕೇಂದ್ರ ಕಛೇರಿ ಹೊರತು ಪಡಿಸಿ ಇತರ ಐದು ಪ್ರಾದೇಶಿಕ ಕಛೇರಿಗಳು ದೇಶದ ಪ್ರಮುಖ ನಗರಗಳಾದ ಮುಂಬಯಿ, ಚೆನ್ನೈ, ಚಂಡೀಗಢ, ಕೋಲ್ಕತ್ತಾ ಹಾಗು ದೆಹಲಿಗಳಲ್ಲಿವೆ. ಪ್ರಾದೇಶಿಕ ಕಛೇರಿಗಳಲ್ಲಿ ವಿಶೇಷ ಜಾರಿ ನಿರ್ದೇಶಕರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.
ಮೂರನೇ ಹಂತದ ಕಛೇರಿಗಳಾಗಿ ವಲಯ ಕಛೇರಿಗಳು ಅಸ್ತಿತ್ವದಲ್ಲಿದ್ದು ಅವು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಚ್ಚಿ, ದೆಹಲಿ, ಪಣಜಿ, ಗುವಾಹಟಿ, ಹೈದರಾಬಾದ್, ಜೈಪುರ, ಜಲಂಧರ್, ಕೊಲ್ಕತ್ತಾ, ಲಕ್ನೋ, ಮುಂಬಯಿ, ಪಾಟ್ನಾ, ಹಾಗು ಶ್ರೀನಗರ ಗಳಲ್ಲಿವೆ. ಜಂಟಿ ಜಾರಿ ನಿರ್ದೇಶಕರು ಇವುಗಳ ಮುಖ್ಯಸ್ಥರಾಗಿರುತ್ತಾರೆ.