ಪಂಚಾಕ್ಷರಿ ಹಿರೇಮಠ ಅವರು ೧೯೩೩ ಜನೆವರಿ ೬ ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. ಇವರ ಅಣ್ಣ ವೀರಭದ್ರಯ್ಯ ಇವರಿಗಿಂತ ಏಳು ವರ್ಷಕ್ಕೆ ದೊಡ್ಡವರು. ಕೇವಲ ಎರಡು ವರ್ಷದವರಿದ್ದಾಗ ಪಂಚಾಕ್ಷರಿ ತನ್ನ ತಂದೆಯನ್ನು ಕಳೆದುಕೊಂಡ. ಧೃತಿಗೆಡದ ತಾಯಿ ಇಬ್ಬರೂ ಮಕ್ಕಳನ್ನು ತಾನೇ ಸಾಕಿ ಸಲುಹಿದಳು.
ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ಮುಂದಿನ ಶಿಕ್ಷಣಕ್ಕಾಗಿ ಪಂಚಾಕ್ಷರಿ ಕೊಪ್ಪಳಕ್ಕೆ ಬಂದಾಗ ಅವರಿಗೆ ೧೦- ೧೨ ವರ್ಷ ವಯಸ್ಸು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಾಮಾನಂದ ತೀರ್ಥ, ಮುಂದಾಳ್ತನದಲ್ಲಿ ಹೈದರಾಬಾದ ವಿಮೋಚನಾ ಚಳುವಳಿ ಪ್ರಾರಂಭವಾಯಿತು. ೧೯೪೮ ಸಪ್ಟಂಬರ ೧೭ ರಂದು ಹೈದರಾಬಾದ ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಕೊಪ್ಪಳ, ಕಲಬುರ್ಗಿ ಗಳನ್ನೆಲ್ಲ ಸುತ್ತಾಡುತ್ತ ಕೆಲ ಕಾಲ ಕಳೆದರು.ಕೊನೆಗೊಮ್ಮೆ ಧಾರವಾಡ ಕ್ಕೆ ಬಂದಿಳಿದಾಗ ಇವರಿಗೆ ಇಪ್ಪತ್ತು ವರ್ಷ.
ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೆ ನಿಲ್ಲಿಸಬೇಕಾಗಿ ಬಂದರೂ ಸಹ, ಪಂಚಾಕ್ಷರಿ ಹಿರೇಮಠ ಅವರು ಸ್ವಾಧ್ಯಾಯ ಬಲದಿಂದಲೆ ಸ್ನಾತಕೋತ್ತರ ಪದವಿ ಪಡೆದರು. ೧೯೮೫ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ( World University of Arizona ), ಡಿ.ಲಿಟ್ ಪದವಿಯನ್ನು ಪಡೆದ ಪ್ರಥಮ ಕನ್ನಡಿಗ.
ಪಂಚಾಕ್ಷರಿ ಹಿರೇಮಠ ಪತ್ರಕರ್ತರಾಗಿ, ಪ್ರಕಾಶಕರಾಗಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯರಚನೆಯನ್ನು ಕನ್ನಡದಲ್ಲಿ ಅಲ್ಲದೆ ಉರ್ದು ಹಾಗು ಹಿಂದಿ ಗಳಲ್ಲಿ ಸಹ ಮಾಡಿದ್ದಾರೆ. ಉರ್ದು, ಹಿಂದಿ, ಗುಜರಾತಿ ಸಾಹಿತ್ಯವನ್ನಲ್ಲದೆ ರಶಿಯಾ, ಜಾರ್ಜಿಯಾ ಹಾಗು ಉಝ್ಬೇಕಿಸ್ತಾನ ದ ಸಾಹಿತ್ಯವನ್ನೂ ಸಹ ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೩ ರಲ್ಲಿ ನಿವೃತ್ತರಾದರು.
ಪಂಚಾಕ್ಷರಿ ಹಿರೇಮಠ ಅವರ ಕತೆಯು ಕೋರಿಯಾ ದಿಂದ ಪ್ರಕಾಶಿತವಾದ Asian Literature ಪುಸ್ತಕದಲ್ಲಿ ಸ್ಥಾನ ಪಡೆದಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಗಾಗಿ ಹಾಗು National Book Trust ಗಾಗಿ ಅನೇಕ ಪುಸ್ತಕಗಳನ್ನು ಪಂಚಾಕ್ಷರಿಯವರು ಅನುವಾದಿಸಿದ್ದಾರೆ.
೧೯೫೪ ರಿಂದಲೆ ಹಿರೇಮಠರವರು ಆಕಾಶವಣಿಯಲ್ಲಿ ಹಾಗು ಆಬಳಿಕ ದೂರದರ್ಶನದಲ್ಲಿ ಭಾಷಣ, ಕಾವ್ಯವಾಚನ, ನಾಟಕ, ಸಂದರ್ಶನ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
೧೯೮೪ರಲ್ಲಿ ನೇಪಾಳ ಸಾಹಿತ್ಯ ಸಮಿತಿಯ ಆಹ್ವಾನದ ಮೇರೆಗೆ ನೇಪಾಳವನ್ನು ಸಂದರ್ಶಿಸಿದರು ಹಾಗು The Royal Nepali Academi ಯಿಂದ ಗೌರವಿಸಲ್ಪಟ್ಟರು.
೧೯೮೫ ರಲ್ಲಿ ಅಮೆರಿಕೆಯ ಅರಿಝೋನಾ ದಲ್ಲಿರುವ World University ಯಿಂದ ಗೌರವ ಡಿ.ಲಿಟ್ ಪದವಿ ಪಡೆದರು.
ಅದೇ ವರ್ಷ ಸಪ್ಟಂಬರದಲ್ಲಿ ಗ್ರೀಸ್ ದೇಶದ ಕೋರ್ಫೂ ದಲ್ಲಿ ನಡೆದ World Poets Meet ದಲ್ಲಿ ಭಾಗವಹಿಸಿದರು. ಅಲ್ಲಿಂದ ಇಜಿಪ್ತ ದೇಶಕ್ಕೆ ಪ್ರಯಾಣಿಸಿದಾಗ ರೇಡಿಯೊ ಇಜಿಪ್ತ ಇವರ ಸಂದರ್ಶನವನ್ನು ಪಡೆಯಿತು, ಮತ್ತು ಇವರ ಕೆಲ ಕವಿತೆಗಳನ್ನು ಪ್ರಸಾರ ಮಾಡಿತು.
೧೯೮೮ ನವಂಬರದಲ್ಲಿ ಹಿರೇಮಠರವರು ಬ್ಯಾಂಗ್ಕಾಕ್ ದಲ್ಲಿ ನಡೆದ Tenth World Conference ದಲ್ಲಿ ಥಾಯಿ ಸರಕಾರದ ಆಮಂತ್ರಣದ ಮೇರೆಗೆ ಭಾಗವಹಿಸಿ ಪ್ರಬಂಧವಾಚನ ಮಾಡಿದರು.
೧೯೮೮ರಲ್ಲಿ ಇವರ ' ಮಿತ್ರದೇಶದ ಕವಿತೆಗಳು ಈ ಕವನಸಂಕಲನಕ್ಕೆ The Soviet Land Nehru Award ದೊರೆಯಿತು.
೧೯೯೪ ರಲ್ಲಿ ಚೀನಾ ದ ತೈಪೈ ದಲ್ಲಿ ನಡೆದ Fifteenth World Poets Conference ದಲ್ಲಿ ಭಾಗವಹಿಸಿದರು.
ಪಂಚಾಕ್ಷರಿ ಹಿರೇಮಠರವರ ಪತ್ನಿ ಶಾಂತಾದೇವಿ. ಮಕ್ಕಳು ಜಯದೇವ, ಮೃತ್ಯುಂಜಯ ಹಾಗು ವಿಜಯಶ್ರೀ .