This article may require a complete rewrite to comply with Wikipedia's quality standards, as ಅಕ್ಷರ ದೋಷ, ಉಲ್ಲೇಖ. |
ಮಾಧವ ಗಾಡ್ಗೀಳ್ (೧೯೪೨)ರವರು ಭಾರತೀಯ ಪರಿಸರವಿಜ್ಞಾನಿ,ಲೇಖಕ,ಅಂಕಣಕಾರ ಹಾಗೂ ಸೆಂಟರ್ ಆಫ್ ಇಕೋಲಾಜಿಕಲ್ ಸೈನ್ಸ್ನ ಸ್ಥಾಪಕ . ಇವರು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ಮತ್ತು ಪಶ್ಚಿಮಘಟ್ಟಗಳ ಸಂರಕ್ಷಣೆಯ ಕುರಿತು ರಚಿಸಲಾದ ಪಶ್ಚಿಮಘಟ್ಟ ಪರಿಸರವಿಜ್ಞಾನ ಪರಿಣಿತರ ತಂಡ (ಗಾಡ್ಗೀಳ್ ಸಮಿತಿ)ಯ ಮುಖ್ಯಸ್ಥರಾಗಿದ್ದರು.
ಮಾಧವ ಗಾಡ್ಗೀಳ್ರವರು ೨೪ ಮೇ ೧೯೪೨ರಲ್ಲಿ ಪುಣೆಯಲ್ಲಿ ಪ್ರಮೀಳಾ ಹಾಗೂ ಅರ್ಥಶಾಸ್ತ್ರಜ್ಞರಾದ ಧನಂಜಯ ರಾಮಚಂದ್ರ ಗಾಡ್ಗೀಳ್ (ಗಾಡ್ಗೀಳ್ ಫಾರ್ಮುಲಾದ ಕೃರ್ತ) ದಂಪತಿಗಳಿಗೆ ಜನಿಸಿದರು.ಗಾಡ್ಗೀಳ್ರವರು ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಜೀವಶಾಸ್ತ್ರದ ಪದವಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದ ಪದವಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.
೧೯೭೧ರಲ್ಲಿ ಅಮೇರಿಕಾದಿಂದ ಭಾರತಕ್ಕೆ ಮರಳಿದ ಗಾಡ್ಗೀಳ್ರವರು ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ೨ ವರ್ಷ ಕೆಲಸ ನಿರ್ವಹಿಸಿ, ೧೯೭೩ರಲ್ಲಿ ಬೆಂಗಳೂರಿನ ಐಐಎಸ್ಸಿ ಸೇರಿದರು,ಅಲ್ಲಿ ೩೦ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ, ೨೦೦೪ರಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.ಇದಲ್ಲದೆ ಗಾಡ್ಗೀಳ್ರವರು ಸ್ಟಾನ್ಡ್ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
೧೯೮೦ರ ದಶಕದಲ್ಲಿ ನೀಲಗಿರಿ ಅರಣ್ಯ ಪ್ರದೇಶವನ್ನು ಭಾರತದ ಮೊದಲ ಜೈವಿಕ ಅರಣ್ಯವನ್ನಾಗಿಸುವುದರಲ್ಲಿ ಗಾಡ್ಗೀಳ್ರವರ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸಿವೆ. ೨೦೧೦-೨೦೧೧ರಲ್ಲಿ ಗಾಡ್ಗೀಳ್ ಸಮಿತಿಯ ಮುಖ್ಯಸ್ಥರಾಗಿ ಪಶ್ಚಿಮಘಟ್ಟಗಳ ಸಂರಕ್ಷಣೆಯ ಕುರಿತಾಗಿ ೧೮ ತಿಂಗಳುಗಳ ಕಾಲ ಶ್ರಮವಹಿಸಿ,ಸಂಶೋಧನೆ ನಡೆಸಿ ಜಾಗತಿಕ ಅತೀ ಸೂಕ್ಷ್ಮ ಜೀವ ವೈವಿಧ್ಯತಾ ತಾಣವಾದ ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆಗಾಗಿ ಗಾಡ್ಗೀಳ್ ವರದಿ (೩೦ ಆಗಸ್ಟ್ ೨೦೧೧)ಯನ್ನು ಸಲ್ಲಿಸಿದ್ದಾರೆ. ೨೦೦೨ರಲ್ಲಿ ಜೀವ ಸಂರಕ್ಷಣಾ ಕಾಯಿದೆಯ ಕರಡು ಸಮಿತಿ ಸದಸ್ಯರಾಗಿ ಗಾಡ್ಗೀಳ್ರವರು ಮಾಡಿದ ಶಿಫಾರಸ್ಸುಗಳನ್ನು ರಾಷ್ಟ್ರೀಯ ಜೀವ ಸಂರಕ್ಷಣಾ ಸಮಿತಿಯು ಅಂಗೀಕರಿಸಿದೆ. ಗಾಡ್ಗೀಳ್ರವರು ಜನಸಂಖ್ಯಾ ಜೀವಶಾಸ್ತ್ರ, ಸಂರಕ್ಷಣಾ ಶಾಸ್ತ್ರ,ಮಾನವ ಪರಿಸರವಿಜ್ಞಾನ, ಪರಿಸರವಿಜ್ಞಾನ ಚರಿತ್ರೆಯ ಕುರಿತಾಗಿ ೨೫೦ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ವಿವಿಧ ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇದಲ್ಲದೆ, ದಿಸ್ ಫಿಶ್ಯೂರ್ಡ್ ಲ್ಯಾಂಡ್ (೧೯೯೨), ಇಕೋಲಾಜಿ ಆ್ಯಂಡ್ ಇಕ್ವಾಲಿಟಿ (೧೯೯೫) ಪುಸ್ತಕಗಳನ್ನು ಬರೆದಿದ್ದಾರೆ. ಮತ್ತು ೧೯೯೮ರಲ್ಲಿ ಪಿ.ಎಸ್.ಶೇಷಗಿರಿ ರಾವ್ರೊಂದಿಗೆ ನ್ಯೂಟರಿಂಗ್ ಬಯೋಡೈವರ್ಸಿಟಿ ಆನ್ ಇಂಡಿಯನ್ ಅಜೆಂಡಾ ಎಂಬ ಪುಸ್ತಕವನ್ನು ರಚಿಸಿದ್ದಾರೆ. ೨೦೦೫ರಲ್ಲಿ ಡೈವರ್ಸಿಟಿ: ದಿ ಕಾರ್ನರ್ಸ್ಟೋನ್ ಆಫ್ ಲೈಫ್ ಹಾಗೂ ಇಕೋಲಾಜಿಕಲ್ ಸರ್ವೆಸ್ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಗಾಡ್ಗೀಳ್ರವರ ಎಲ್ಲಾ ಪುಸ್ತಕಗಳೂ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಗಾಡ್ಗೀಳ್ರವರು ಪ್ರಕಾಶಕರಾಗಿಯೂ ತಮ್ಮ ಪ್ರಕಾಶನದಿಂದ ಎರಡು ಮರಾಠಿ ವೈಜ್ಞಾನಿಕ ಪುಸ್ತಕಗಳನ್ನು ಹೊರತಂದಿದ್ದಾರೆ.
ಇವರಿಗೆ ಭಾರತ ಸರಕಾರವು ೧೯೮೧ರಲ್ಲಿ ಪದ್ಮಶ್ರೀ ಹಾಗೂ ೨೦೦೬ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.