ಮೈಸೂರು ವಿಶ್ವವಿದ್ಯಾಲಯವು ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾಲಯ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೬೫ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಎಚ್.ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ. [೧]
ಮುಖ್ಯವಾಗಿ ಷಿಕಾಗೊ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ರಚನೆ ಮತ್ತು ಆಡಳಿತಗಳ ಆಳವಾದ ವಿಶ್ಲೇಷಣೆಯ ಮೇಲೆ ಮೈಸೂರು ವಿಶ್ವವಿದ್ಯಾಲಯವನ್ನು ಆಧರಿಸಲಾಯಿತು. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಅಪ್ರತಿಮ ವಿದ್ಯಾ ಕೇಂದ್ರಗಳಲ್ಲಿ ಒಂದೆನಿಸಿತು.
ನನಸಾದ ವಿಶ್ವವಿದ್ಯಾನಿಲಯ ಸ್ಥಾಪನೆಯ ಹಿಂದೆ, ಆಧುನಿಕ ಮೈಸೂರು ನಿರ್ಮಾಪಕ ಎಂಬ ಪ್ರಶಂಸೆಗೆ ಪಾತ್ರರಾದ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಶಿಕ್ಷಣದ ರೂವಾರಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಣಿಕೆ ಬಹಳ ದೊಡ್ಡದು.
ಹೇಮಂತ್ ಕುಮಾರ್ ಪ್ರಸಕ್ತ ಹಂಗಾಮಿ ಉಪಕುಲಪತಿಗಳಾಗಿ ಕಾರ್ಯ ನಿರ್ವಹಿಸುತಿದ್ದಾರೆ. [[೨]]
"ನಹಿ ಜ್ಞಾನೇನ ಸದೃಶಂ" ಎಂಬುದು ಮೈಸೂರು ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯವಾಗಿದೆ. ಅಂದರೆ ಜ್ಞಾನಕ್ಕೆ ಸಮಾನವಾದದು ಬೇರೆ ಇಲ್ಲ ಎಂದರ್ಥ. ಈ ವಾಕ್ಯವನ್ನು ಭಗವದ್ಗೀತೆಯಿಂದ ಆಯ್ದುಕೊಳ್ಳಲಾಗಿದೆ. ಇದನ್ನು ದೇವನಾಗರಿ ಲಿಪಿ ಯಲ್ಲಿ ಬರೆಯಲಾಗಿದೆ. ಈ ಲಾಂಛನದ ತಳಭಾಗದಲ್ಲಿ 'ಸತ್ಯಮೇವೋದ್ಧರಾಮ್ಯಹಂ' ಎಂಬ ಸಂಸ್ಕೃತ ನುಡಿ ಇದೆ. ಅಂದರೆ- ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ ಎಂಬುದಾಗಿದೆ.
೧೯೩೩ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಾರಾಂಗ ಶುರುವಾಯಿತು. ಬಹುತೇಕ ಶಿಕ್ಷಣತಜ್ಞರ ಪ್ರಕಾರ ಇದು ಮೈಸೂರು ವಿಶ್ವವಿದ್ಯಾನಿಲಯದ ಜೀವನಾಡಿ. ವಿಶ್ವವಿದ್ಯಾನಿಲಯದ ಪ್ರಕಟಣೆಗಳನ್ನು ಹೊರತರುವುದು ಇದರ ಮುಖ್ಯಧ್ಯೇಯ. ಈ ಸಂಸ್ಥೆ ತನ್ನ ನೆಲದ ಅನಕ್ಷರಸ್ಥರಿಗಾಗಿ ಪ್ರಚಾರೋಪನ್ಯಾಸ ಮಾಲೆ ಎಂಬ ವಿಶಿಷ್ಟಸೇವೆಯನ್ನು ಆರಂಭಿಸಿತು.
ಈ ಕುರಿತು ಶ್ರೀಯುತ ಕುವೆಂಪು ಅವರ ಮಾತಿನಲ್ಲಿ ಹೇಳುವುದಾದರೆ - 'ದೇಶದಲ್ಲಿರುವ ಎಲ್ಲರೂ ವಿಶ್ವವಿದ್ಯಾನಿಲಯಕ್ಕೆ ಹೋಗಲಾರರಷ್ಟೇ! ಆದರೆ ವಿಶ್ವವಿದ್ಯಾನಿಲಯ ಎಲ್ಲರ ಮನೆ ಬಾಗಿಲಿಗೂ ಹೋಗಬಲ್ಲದು.' ಈ ರೀತಿ ವಿಶ್ವವಿದ್ಯಾನಿಲಯದ ತಜ್ಞರು ಹಳ್ಳಿ ಹಳ್ಳಿಗೆ ತೆರಳಿ, ರೈತಾಪಿ ಜನರಿಗೆ ಉಪನ್ಯಾಸ ನೀಡುವುದು ಹಾಗೂ ಈ ಉಪನ್ಯಾಸವನ್ನು ಕಿರು ಪುಸ್ತಕರೂಪದಲ್ಲಿ ಪ್ರಕಟಿಸಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುವುದಾಗಿದೆ.
ಈ ಯೋಜನೆಯ ಉದ್ದೇಶ ದುಡ್ಡು ಮಾಡುವುದಲ್ಲ. ವಿಶ್ವವಿದ್ಯಾನಿಲಯದ ಜನತೆಯ ನಡುವೆ ಜ್ಞಾನ೮ಪ್ರಸಾರ ಮಾಡುವುದು. ಹಾಗಾಗಿ ಆರಂಭದಲ್ಲಿ ಪುಸ್ತಕದ ಮುಖಬೆಲೆ ಎರಡಾಣೆಯಾಗಿತ್ತು. ಇದುವರೆವಿಗೂ ಸಾವಿರಾರು ವಿಷಯಗಳ ಕುರಿತು, ಲಕ್ಷಾಂತರ ಪುಸ್ತಕಗಳು ಬಿಕರಿಯಾಗಿವೆ. ಆಧುನಿಕ ವಿಜ್ಷಾನದ ವಿಷಯಗಳಿಂದ ಹಿಡಿದು, ವೈದ್ಯಕೀಯ ವಿಷಯಗಳು, ಕಣ್ಣು ಮತ್ತು ಅದರ ರಕ್ಷಣೆ, ಹೆರಿಗೆ ಮತ್ತು ಶಿಶುಸಂರಕ್ಷಣೆಯಂಥ ಪುಸ್ತಕಗಳು ಈ ಯೋಜನೆಯಲ್ಲಿ ಪ್ರಕಟವಾಗಿವೆ. ಇದು ೧೯೩೪ ರಲ್ಲಿ ಆಕ್ಸ್ ಫರ್ಢ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯಗಳ ಸಮ್ಮೇಳನದಲ್ಲಿ ಗಮನಸೆಳೆಯಿತು. ಮುಂದೆ ಜಾಗತಿಕವಾಗಿ ' ಮೈಸೂರು ವಿಶ್ವವಿದ್ಯಾನಿಲಯ ಪ್ರಯೋಗ' ಎಂದೇ ಪ್ರಸಿದ್ಧಿಯಾಯಿತು.
ಯಾವುದೇ ವಿಶ್ವವಿದ್ಯಾನಿಲಯದ ಗುಣಮಟ್ಟವನ್ನು ಅಲ್ಲಿನ ಸುಂದರವಾದ ಕ್ಯಾಂಪಸ್ನಿಂದಾಗಲಿ, ಸೌಲಭ್ಯ-ಸೌಕರ್ಯ, ಕಟ್ಟಡ, ವಾಸ್ತುಶಿಲ್ಪಗಳಿಂದಾಗಲಿ ಅಳೆಯುವುದಿಲ್ಲ. ಬದಲಿಗೆ ಆ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡಿದ ಅಧ್ಯಾಪಕರು ಹಾಗೂ ವಿಶ್ವವಿದ್ಯಾನಿಲಯ ರೂಪಿಸಿದ ವಿಜ್ಞಾನಿಗಳು, ಕಲಾವಿದರು, ಸಾಹಿತಿಗಳು, ಸಾಧಕರ ಪಟ್ಟಿಯನ್ನು ನೋಡಿ, ವಿಶ್ವವಿದ್ಯಾನಿಲಯದ ಒಳ ಸೌಂದರ್ಯವನ್ನು ಅಳೆಯುತ್ತಾರೆ.
ಅಂತೆಯೇ ಮೈಸೂರು ವಿಶ್ವವಿದ್ಯಾನಿಲಯ ಕೂಡ ಬದುಕಿನ ನಾನಾ ವಲಯಗಳಿಗೆ ಶ್ರೇಷ್ಠವಾದ ಮಾನವಸಂಪನ್ಮೂಲವನ್ನು ನೀಡಿದೆ. ಆಡಳಿತ, ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ನಾಟಕ, ಸಂಗೀತ, ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿದ ಸಾವಿರಾರು ಮಂದಿ ವಿದ್ಯಾರ್ಥಿಗಳು, ಅಧ್ಯಾಪಕರು ಇಲ್ಲಿಂದ ಒಡಮೂಡಿದ್ದಾರೆ.
೧೧ ಅಧ್ಯಯನ ವಿಭಾಗಗಳ ಮೂಲಕ ೧೯೧೬ ರಲ್ಲಿ ಆರಂಭವಾದ ಮೈಸೂರು ವಿಶ್ವವಿದ್ಯಾನಿಲಯ ಕಳೆದ ಒಂಭತ್ತುವರೆ ದಶಕದಲ್ಲಿ ಕ್ರಮಿಸಿರುವ ಹಾದಿ ಅನನ್ಯ. ಪ್ರಸ್ತುತ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ೫೪ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ೨೦೨ ಸಂಯೋಜಿತ ಕಾಲೇಜುಗಳು, ೪೯ ಸಂಶೋಧನ ಸಂಸ್ಥೆಗಳು, ೩೮ ಹೊರ ರೀಚ್ ಕೇಂದ್ರಗಳು, ೫೫೦೦ ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಒಳಗೊಂಡು, ಇಡೀ ದಕ್ಷಿಣ ಭಾರತಕ್ಕೆ ಹೆಮ್ಮೆಯ ವಿಶ್ವವಿದ್ಯಾ ನಿಲಯವಾಗಿದೆ.
ಇಲ್ಲಿ ೩೬ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಂತರಾಷ್ಟ್ರೀಯ ಕೇಂದ್ರ, ಎಜುಕೇಶನಲ್ ಮಲ್ಟಿಮೀಡಿಯಾ ರೀಸರ್ಚ ಸೆಂಟರ್, ಸೆಂಟರ್ ಫಾರ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ(ಸಿಸ್ಟ್), ಯೂನಿವರ್ಸಿಟಿ ಆಫ್ ಸ್ಕೂಲ್ ಡಿಸೈನ್, ಗಾಂಧಿಭವನ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಸೆಂಟರ್ ಫಾರ್ ಪ್ರೊಫಿಶಿಯನ್ಸಿ ಡೆವಲಪ್ಮೆಂಟ್ ಅಂಡ್ ಪ್ಲೇಸ್ಮೆಂಟ್ ಸರ್ವೀಸಸ್, ಹೊರದೇಶಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಹಾಸ್ಟೆಲ್ ಸೌಲಭ್ಯ, ಭವ್ಯವಾದ ಗ್ರಂಥಾಲಯವನ್ನು ಹೊಂದಿದೆ.
ಆಧುನಿಕ ಕಾಲದ ಮೌಲ್ಯಮಾಪನ ವಿಧಿ-ವಿಧಾನ ವ್ಯವಸ್ಥೆಗೆ ತಕ್ಕಂತೆ ರೂಪುಗೊಳ್ಳುತ್ತಿರುವ ವಿಶ್ವವಿದ್ಯಾನಿಲಯ ಇದುವರೆವಿಗೂ ನ್ಯಾಕ್ ನಿಂದ ಮೂರು ಬಾರಿ ಮೌಲ್ಯಾಂಕನಕ್ಕೆ ಒಳಗಾಗಿ, ಅಷ್ಟೂ ಬಾರಿಯೂ ನ್ಯಾಕ್ ಮಾನ್ಯತೆ ಪಡೆದಿದೆ. ಪ್ರಸ್ತುತ ನ್ಯಾಕ್ ನಿಗದಿಪಡಿಸಿದ್ಧ ೪ ಅಂಕಗಳ ಸ್ಕೇಲ್ ನಲ್ಲಿ, ೩.೪೭ ಕ್ರಮಾಂಕದಲ್ಲಿ ಗುರುತಿಸಿಕೊಂಡಿರುವ ವಿವಿ 'ಎ' ಗ್ರೇಡ್ ಮಾನ್ಯತೆ ಪಡೆದಿದೆ. ೧೯೮೬ ರಿಂದ ಇಲ್ಲಿಯವರೆವಿಗೂ ೩೬೦೦ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದೆ.
ಇದೆಲ್ಲದರೆ ಪರಿಣಾಮ ಕೇಂದ್ರ ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯವನ್ನು ೨೦೧೧-೧೨ನೇ ಸಾಲಿನಲ್ಲಿ "ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್" ಎಂಬ ಕೀರ್ತಿ ನೀಡಿ ೧೦೦ ಕೋಟಿ ರೂ.ಅನುದಾನ ನೀಡಿದೆ. ವಿಶ್ವವಿದ್ಯಾ ನಿಲಯದಲ್ಲಿ ನಡೆಯುವ ಸಂಶೋಧನೆಗಳಿಗೆ ಮನಸೋತ ಯುಜಿಸಿ ಕೂಡ 'ಯೂನಿವರ್ಸಿಟಿ ವಿತ್ ಪೊಟೆಂಷಿಯಲ್ ಫಾರ್ ಎಕ್ಸಲೆನ್ಸ್ ಎಂದು ಬೆನ್ನು ತಟ್ಟಿ ೫೦ ಕೋಟಿ ನೀಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಹೆಮ್ಮೆಯ ಅಂಗ ಸಂಸ್ಥೆಯಾದ ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜು ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು. ೨೦೧೫ ರಲ್ಲಿ ಸುವರ್ಣ ಮೊಹೋತ್ಸವವನ್ನು ಆಚರಿಸಿರುವ ಈ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದ, ಮಾಡುತ್ತಿರುವ ಮೈಸೂರಿನ ಹೆಮ್ಮೆಯ ವಿದ್ಯಾಸಂಸ್ಥೆ. ಇಲ್ಲಿ ತರಗತಿಗಳು ಸಂಜೆ ವೇಳೆ ನಡೆಯುವುದರಿಂದ ಬಹುತೇಕ ಉದ್ಯೋಗಸ್ಥರ ಅಕ್ಷರ ದಾಹವನ್ನು ನೀಗುತ್ತಿರುವ ಸಂಜೆ ಮಲ್ಲಿಗೆ ಇದು.
ಪ್ರಸ್ತುತ ಬಿ.ಎ. ಬಿ.ಕಾಂ ಮತ್ತು ಬಿ.ಬಿ.ಎಂ ಪದವಿಗಳಿಗೆ ಇಲ್ಲಿ ಪ್ರವೇಶಾತಿ ಉಂಟು. ೨೦೧೩-೧೪ನೇ ಸಾಲಿನಲ್ಲಿ ಮೈಸೂರು ವಿ.ವಿ.ಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಂಜೆ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಆರಂಬಿಸಿದೆ. ಈ ಸಾಲಿನಿಂದ ಎಂ.ಎ. ಇತಿಹಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪ್ಸಿಸಲಾಗಿದೆ. ಪ್ರಸ್ತುತ ೧೮ ಅಧ್ಯಾಪಕರು ಮತ್ತು ಸುಮಾರು ೩೦ ಮಂದಿ ಅತಿಥಿ ಉಪನ್ಯಾಸಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು ೮೦೦ ವಿದ್ಯಾರ್ಥಿಗಳಿದ್ದಾರೆ.
ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ[ಎನ್.ಎಸ್.ಎಸ್] ಮತ್ತು ರಾಷ್ಟ್ರೀಯ ಸೇವಾದಳ[ಎನ್.ಸಿ.ಸಿ] ಘಟಕಗಳು ಸಕ್ರಿಯವಾಗಿವೆ. ಕಾಲೇಜಿನಿಂದ "ಸಂಜೆ ಮಲ್ಲಿಗೆ" ಎಂಬ ವಾರ್ಷಿಕ ಸಂಚಿಕೆ ಹೊರಬರುತ್ತಿದೆ. ಈ ಬಾರಿ ಎಂ ಎ.ಇತಿಹಾಸ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗಿದ್ದು 'ಎ'ಯೋಜನೆ[ಸ್ಕೀಮ್] ಅಡಿಯಲ್ಲಿ ೧೪ ಸೀಟುಗಳು ಮತ್ತು 'ಬಿ'ಯೋಜನೆ[ಸ್ಕೀಮ್] ಅಡಿಯಲ್ಲಿ ೭ ಸೀಟುಗಳು ಲಭ್ಯವಿವೆ.
ಮೈಸೂರು ವಿಶ್ವವಿದ್ಯಾಲಯದ ಲಾಂಛನವು ವಿಶೇಷತೆಯಿಂದ ಕೂಡಿರುವಂತಹುದು. ಅದರ ಎರಡು ಪಾರ್ಶ್ವಗಳಲ್ಲೂ ಶರಭಪ್ರಾಣಿಯನ್ನು ಹೊಂದಿ, ನಡುವೆ ಎರಡು ಶಿರಗಳುಳ್ಳ 'ಗಂಡುಭೇರುಂಡ, ಪಕ್ಷಿಯಿಂದ ಕೂಡಿದೆ. ಆ ಶರಭಪ್ರಾಣಿಗೆ ಆನೆಯ ತರಹದ ಸೊಂಡಿಲಿದೆ. ಇವೆರಡು ಪೌರಾಣಿಕ/ಕಾಲ್ಪನಿಕ ಪ್ರಾಣಿ-ಪಕ್ಷಿಗಳಾಗಿವೆ. ಈ ಸಂಕೇತಗಳು ವಿದ್ಯಾವಂತರಲ್ಲಿರಬೇಕಾದ ಜಾಗೃತಿ, ಶೀಲ, ಏಕತೆ, ಧೈರ್ಯ, ಔದಾರ್ಯ ಸಮರಸ ಬಾಳ್ವೆ ಮತ್ತು ಸತ್ಯವನ್ನು ಪ್ರತಿನಿಧಿಸುತ್ತವೆ.
ಈ ಲಾಂಛನದ ಮೇಲೆ "ನ ಹಿ ಜ್ಞಾನೇನ ಸದೃಶಂ" ಎಂಬ ಧ್ಯೇಯವಾಕ್ಯವಿದೆ. ಅಂದರೆ "ಜ್ಞಾನಕ್ಕೆ ಸಮನಾದುದು ಬೇರೊಂದಿಲ್ಲ" ಎಂಬರ್ಥವಿದೆ. ಅಲ್ಲದೆ ಈ ಲಾಂಛನದಲ್ಲಿ ಮತ್ತೊಂದು ಸಂಸ್ಕೃತ ನುಡಿಯಾದ 'ಸತ್ಯಮೇವೂದ್ಧರಾಮ್ಯಹಂ'ನ್ನು ರೇಖಿಸಲ್ಪಟ್ಟಿದೆ. ಅಂದರೆ ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ, ಸತ್ಯವಂತರಿಂದಾಗಿ ಈ ಭೂಮಿ ಉಳಿದಿದೆ ಎಂಬ ಆದರ್ಶ ಪರಿಕಲ್ಪನೆ ಇಲ್ಲಿದೆ.
ಭಾರತದ ವಿದ್ಯಾಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹೇಗೆ ತನ್ನದೇ ಆದ ಛಾಪು ಮೂಸಿಡಿದೆಯೋ ಅದೇ ರೀತಿ ವಿ.ವಿ.ಯ ಕ್ಯಾಂಪಸ್ ಸೌಂದರ್ಯವು ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ. ಸುಮಾರು ೬೫೦ ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹಸಿರು ಮತ್ತು ನೀರಿನ ಸಮ್ಮಿಲನದಿಂದ ಹೆಣೆದುಕೊಂಡಿರುವ ಈ ವಿದ್ಯಾಕ್ಷೇತ್ರ ನೋಡುಗರ ಮನವನ್ನು ಸೆಳೆಯುತ್ತಿದೆ. ಈ ಕ್ಯಾಂಪಸ್ನ ಮುಖ್ಯ ಆಕರ್ಷಣೆ, ಗ್ರಂಥಾಲಯ, ಬಯಲು ರಂಗಮಂದಿರ, ವೃತ್ತಾಕಾರದ ಕ್ಯಾಂಟೀನ್ ಮತ್ತು ಪ್ರಸಿದ್ಧವಾದ ಕುಕ್ಕರಹಳ್ಳಿ ಕೆರೆ
ಮೈಸೂರು ವಿಶ್ವ ವಿದ್ಯಾನಿಲಯವು ಸಾಮಾಜಿಕ ಜವಾಬ್ದಾರಿಯುತ ತಾಣವಾಗಿದೆ. ಅನೇಕ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿನ ಪರಿಸರದಲ್ಲಿನ ಬದಲಾವಣೆಯನ್ನು ಗಮನಿಸಿ, ಅವರಿಗೂ ಸಹ ತಮ್ಮ ಮೇಲಿನ ಜವಾಬ್ದಾರಿ ತಿಳಿಯಲು ಅನುಕೂಲಕರವಾದ ವಾತಾವರಣ ಸೃಷ್ಟಿಸುತ್ತದೆ.
ಮೈಸೂರು ವಿಶ್ವವಿದ್ಯಾನಿಲಯ ತನ್ನ ಶತಮಾನೋತ್ಸವದ ಸಂಭ್ರಮದಲ್ಲಿ