ರಾಜಾ ರಾಮಣ್ಣ | |
---|---|
ಚಿತ್ರ:A true scientist.jpg ರಾಜಾ ರಾಮಣ್ಣ (೧೯೨೫-೨೦೦೪) | |
ಜನನ | ತಿಪಟೂರು, ತುಮಕೂರು ಜಿಲ್ಲೆ, ಕರ್ನಾಟಕ | ೨೮ ಜನವರಿ ೧೯೨೫
ಮರಣ | September 24, 2004 ಮುಂಬಯಿ, ಮಹಾರಾಷ್ಟ್ರ, ಭಾರತ | (aged 79)
ವಾಸಸ್ಥಳ | ಮುಂಬಯಿ, ಭಾರತ |
ಪೌರತ್ವ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ಭಾಭಾ ಅಣು ಸಂಶೋಧನ ಕೇಂದ್ರ Defence Research and Development Organisation International Atomic Energy Agency Ministry of Defence National Institute of Advanced Studies |
ಅಭ್ಯಸಿಸಿದ ವಿದ್ಯಾಪೀಠ | Bishop Cotton Boys' School, Madras Christian College King’s College London, ಯುನೈಟೆಡ್ ಕಿಂಗ್ಡಂ |
ಪ್ರಸಿದ್ಧಿಗೆ ಕಾರಣ | Operation Smiling Buddha Operation Shakti Indian nuclear programme |
ಗಮನಾರ್ಹ ಪ್ರಶಸ್ತಿಗಳು | ಪದ್ಮ ಶ್ರೀ (1968) ಪದ್ಮ ಭೂಷಣ (1973) ಪದ್ಮ ವಿಭೂಷಣ (1975) |
ಡಾ. ರಾಜಾ ರಾಮಣ್ಣ ಆಧುನಿಕ ಭಾರತದ ಒಬ್ಬ ಅಪ್ರತಿಮ ವಿಜ್ಞಾನಿ. ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ರಾಜಾ ರಾಮಣ್ಣನವರು ೧೯೭೪ರ ಮೇ ೧೮ರಂದು ರಾಜಸ್ಥಾನದ ಪೋಖ್ರಾನ್ನಲ್ಲಿ ಜರುಗಿದ ಭಾರತದ ಪ್ರಥಮ ಪರಮಾಣು ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಹೋಮಿ ಜಹಂಗೀರ್ ಭಾಬಾರವರ ಆಪ್ತ ಶಿಷ್ಯರಾಗಿದ್ದ ರಾಜಾ ರಾಮಣ್ಣನವರದು ಬಹುಮುಖ ಪ್ರತಿಭೆ. ಅವರು ಶ್ರೇಷ್ಠ ಪರಮಾಣು ವಿಜ್ಞಾನಿಯಲ್ಲದೆ ದಕ್ಷ ಆಡಳಿತಗಾರ, ಸಮರ್ಥ ಸಂಘಟಕ, ನುರಿತ ಪಿಯಾನೋ ಹಾಗು ವಿಯೋಲ ವಾದಕ, ವೇದೊಪನಿಷದ್ ಪಾರಂಗತ, ಉಪಾಧ್ಯಾಯ, ದಾರ್ಶನಿಕ, ರಾಜ್ಯಸಭೆ ಸದಸ್ಯ, ರಕ್ಷಣಾ ರಾಜ್ಯ ಮಂತ್ರಿ ಸಹ ಆಗಿದ್ದರು.
ರಾಜಾ ರಾಮಣ್ಣನವರ ಜನನ ಜನವರಿ ೨೮, ೧೯೨೫ ರಂದು ಕರ್ನಾಟಕದ ತುಮಕೂರಿನಲ್ಲಾಯಿತು. ಮೈಸೂರಿನ ಗುಡ್ ಷೇಫರ್ಡ್ ಕಾನ್ವೆಂಟ್, ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಮತ್ತು ಸೇಂಟ್ ಜೋಸೆಫ್ಸ್ ಕಾಲೇಜುಗಳಲ್ಲಿ ಇವರ ಮೊದಲ ವ್ಯಾಸಂಗ ನಡೆಯಿತು. ಮದರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ ಎಸ್ಸಿ (ಆನರ್ಸ್) ಪದವಿ ಪಡೆದ ನಂತರ ೧೯೪೫ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನ ಅಭ್ಯಸಿಸಿ ೧೯೪೯ ರಲ್ಲಿ ಪಿ. ಎಚ್. ಡಿ. ಪದವಿಯನ್ನು ಪಡೆದರು. ತದನಂತರ ಭಾರತಕ್ಕೆ ಮರಳಿ, 1949 ರಲ್ಲಿ ಇವರು ಮುಂಬಯಿಯ ಟಾಟಾ ವಿಜ್ಞಾನ ಕೇಂದ್ರವನ್ನು ಸೇರಿ ಅಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತದಲ್ಲಿ ಭೌತವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಿದ ರಾಜಾ ರಾಮಣ್ಣನವರು, ಪರಮಾಣು ಕೇಂದ್ರ ವಿದಳನೆಯ (ನ್ಯೂಕ್ಲಿಯರ್ ಫಿಜನ್) ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸಿದ್ದರು. 1953 ರಲ್ಲಿ ಇವರು ಟ್ರಾಂಬೆಯ ಪರಮಾಣು ಶಕ್ತಿ ಕೇಂದ್ರದ ನ್ಯೂಕ್ಲಿಯರ್ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ನಿಯೋಜಿತರಾದರು.
ಟ್ರಾಂಬೆಯಲ್ಲಿ ಪರಮಾಣು ಶಕ್ತಿ ಕೇಂದ್ರ ಪ್ರಾರಂಭವಾದಾಗಿನಿಂದ ಅದರ ಎಲ್ಲ ಚಟುವಟಿಕೆಗಳಲ್ಲೂ ರಾಜಾ ರಾಮಣ್ಣ ಪಾಲುಗೊಂಡಿದ್ದಾರೆ. ಅಪ್ಸರ, ಸೈರಸ್ ಮತ್ತು ಪೂರ್ಣಿಮ-ಈ ರಿಯಾಕ್ಟರುಗಳ ವಿನ್ಯಾಸ ಮತ್ತು ರಚನೆಯಲ್ಲಿ ಇವರು ವಹಿಸಿದ ಪಾತ್ರ ಮಹತ್ತ್ವಪೂರ್ಣವಾದ್ದು. ವಾನ್ ಡಿ ಗ್ರಾಫ್ ವೇಗೋತ್ಕರ್ಷಕ, ಕಲ್ಕತ್ತದಲ್ಲಿಯ ವ್ಯತ್ಯಸ್ಥಶಕ್ತಿ ಸೈಕ್ಲೋಟ್ರಾನ್ ಮತ್ತು ಕಲ್ಪಾಕಮ್ನಲ್ಲಿಯ ಸಂಶೋಧನೆಯ ರಿಯಾಕ್ಟರುಗಳು ಇವರ ಅದಮ್ಯ ನಾಯಕತ್ವಕ್ಕೆ ಸಾಕ್ಷಿಗಳಾಗಿವೆ.
ನ್ಯೂಟ್ರಾನ್ ಉಷ್ಣೀಕರಣ, ಮಂದಶಕ್ತಿ ನ್ಯೂಕ್ಲಿಯ ಕ್ರಿಯೆಗಳು, ವಿದಳನ -ಹೀಗೆ ಹಲವು ಪ್ರಕಾರಗಳಲ್ಲಿ ರಾಮಣ್ಣ ಉನ್ನತ ಸಂಶೋಧನೆಗಳನ್ನು ನಡೆಸಿದ್ದಾರೆ. ಇವರು ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಕೆಲಸಕ್ಕಾಗಿ ಇವರಿಗೆ ಅನೇಕ ಬಹುಮಾನಗಳೂ ಫೆಲೋಷಿಪ್ಗಳೂ ಸಂದಾಯವಾಗಿವೆ. ಇವರು ಪ್ರಕಟಿಸಿರುವ ಪ್ರೌಢಲೇಖನಗಳ ಸಂಖ್ಯೆ ಎಂಬತ್ತನ್ನು ಮೀರಿವೆ. ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಇವರು ಪಾಲುಗೊಂಡಿದ್ದಾರೆ. 1963 ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸುವರ್ಣ ಅಧಿವೇಶನದಲ್ಲಿ ಭೌತವಿಜ್ಞಾನ ವಿಭಾಗದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು.
ರಾಜಾ ರಾಮಣ್ಣ ಭೌತವಿಜ್ಞಾನದಲ್ಲಿ ಅಪೂರ್ವ ಸಿದ್ಧಿ ಪಡೆದಿದ್ದರೂ ಪಾಶ್ಚಾತ್ಯ ಸಂಗೀತದಲ್ಲಿ ಇವರಿಗೆ ವಿಶೇಷ ಪರಿಶ್ರಮವಿತ್ತು. ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ತಳೆದಿದ್ದರು.
ಭಾರತದ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೋರೇಟ್ ಪದವಿಗಳನ್ನು ಇತ್ತು ಗೌರವ ತೋರಿವೆ.
ರಾಜಾ ರಾಮಣ್ಣನವರು ಭಾಭಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದಾಗ ನಡೆದ ಮುಖ್ಯ ಘಟನೆಯೆಂದರೆ, ಭಾರತದ ಪ್ರಥಮ ಅಣು ಬಾಂಬ್ ಪರೀಕ್ಷೆ. "ಪೋಖ್ರಾನ್-೧" ಅಥವಾ "ಆಪರೇಷನ್ ಸ್ಮೈಲಿಂಗ್ ಬುದ್ಧ" ಎಂದು ಕರೆಯಲಾಗುವ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ರಾಜಾ ರಾಮಣ್ಣನವರಿಗೆ ಸಲ್ಲುತ್ತದೆ.[೧]
ರಾಜಾ ರಾಮಣ್ಣನವರು ಉತ್ತಮ ಬರಹಗಾರರಾಗಿದ್ದರು. ಅವರ ಎರಡು ಉಲ್ಲೇಖನೀಯ ಕೃತಿಗಳೆಂದರೆ,
ಶ್ರೀಯುತರು ಸೆಪ್ಟೆಂಬರ್ ೨೪, ೨೦೦೪ ರಂದು ಮುಂಬಯಿನಲ್ಲಿ ಅಸುನೀಗಿದರು.[೩]