ರಾಜ್ಯೋತ್ಸವ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೬೬ | |
ಮೊದಲ ಪ್ರಶಸ್ತಿ | ೧೯೬೬ | |
ಕಡೆಯ ಪ್ರಶಸ್ತಿ | ೨೦೨೦ | |
ಪ್ರಶಸ್ತಿ ನೀಡುವವರು | ![]() ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ₹ ೧,೦೦,೦೦೦ | |
ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ (೧೯೬೬–೧೯೭೨) | |
ಪ್ರಶಸ್ತಿಯ ಶ್ರೇಣಿ | ||
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → |
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:
ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.
ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು.
ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ[೨]. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.
202ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಅಥವ ಆಫ್ ಲೈನ್ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಈ ಹಿಂದೆ ಹೊಸ ವ್ಯವಸ್ಥೆಯನ್ನು ತಂದು, ಮೆಚ್ಚುಗೆಯನ್ನು ಪಡೆದಿದ್ದರು. 2022ರಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ , ಶಿಫಾರಸು ಮಾಡುವ ವ್ಯವ್ಸಥೆಸ್ಥಗಿತ ಮಾಡಲಾಯಿತು. ಮತ್ತೊಂದು ಹೊಸ ವಿಧಾನವನ್ನು ಜಾರಿಗೆ ತರಲಾಯಿತು. ಆ ಪ್ರಕಾರ ಹಲವು ಸಮಿತಿಗಳನ್ನು ನೇಮಿಸಿ ರಾಜ್ಯ ಪ್ರವಾಸ ನಡೆಸಿ ಸಮಿತಿಯೆ ಪ್ರಶಸ್ತಿಗೆ ಸೂಕ್ತ ಆದವರನ್ನು ಆಯ್ಕೆ ಮಾಡುವ ವಿಧಾನದ ಮೂಲ 2022ರ ರಾಜ್ಯೋತಸ್ವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ ಮಾಡಲಾಯಿತು.[೧]