ವಾಸುಪೂಜ್ಯ ಸ್ವಾಮಿ ಜೈನ ತೀರ್ಥಂಕರರಲ್ಲಿ ಒಬ್ಬರು.
ಕಾಲಲಬ್ಧಿಯಾದ ಮೇಲೆ ಮೂರು ಜನ್ಮಗಳನ್ನು ಎತ್ತಿದ ಈ ಮಹಾನುಭಾವನು ಶ್ರೇಯಾಂಸ ತೀರ್ಥಂಕರನ ತರುವಾಯ ಐವತ್ತು ನಾಲ್ಕು ಸಾಗರ ಪರಿಮಿತವಾದ ಕಾಲ ಕಳೆದನಂತರ ಜನಿಸಿದನು.
ಮೊದಲ ಜನ್ಮದಲ್ಲಿ ಈತನು ಸೀತಾನದಿಯ ಪಶ್ಚಿಮಕ್ಕಿರುವ ವತ್ಸಕಾವತೀ ದೇಶದ ರಾಜಧಾನಿ ರತ್ನಪಪುರದಲ್ಲಿ ಪದ್ಮೋತ್ತರನೆಂಬ ದೊರೆಯಾಗಿದ್ದನು. ದ್ವಾದಶಾನುಪ್ರೇಕ್ಷೆಗಳ ಚಿಂತನೆಯಿಂದ ವೈರಾಗ್ಯ ಹುಟ್ಟಿ ಸನ್ಯಾಸಿಯಾದನು. ಸಮಾಧಿ ಮರಣದಿಂದ ಮಹಾಶುಕ್ರವೆಂಬ ಸ್ವರ್ಗದಲ್ಲಿ ದೇವೇಂದ್ರನಾಗಿದ್ದು, ಮರುಜನ್ಮದಲ್ಲಿ ಚಂಪಾನಗರದ ಇಕ್ಷ್ವಾಕ್ಷು ವಂಶದ ವಸುಪೂಜ್ಯ ರಾಜನಿಗೂ ಆತನ ಮಡದಿ ಜಯಾವತಿಗೂ ಮಗನಾಗಿ ಫಾಲ್ಗುಣ ಕೃಷ್ಣ ಚತುರ್ದಶಿಯ ವರುಣ ಯೋಗದಲ್ಲಿ ಜನಿಸಿದನು. ಆತನ ಗರ್ಭಾವತರಣ ಕಲ್ಯಾಣವನ್ನು ಮಾಡಿ ಮುಗಿಸಿದ ದೇವೇಂದ್ರ ಆರಕ್ತ ವರ್ಣನಾದ ಈತನಿಗೆ ವಾಸುಪೂಜ್ಯನೆಂದು ನಾಮಕರಣ ಮಾಡಿದನು.
ವಾಸುಪೂಜ್ಯನು ಎಪ್ಪತ್ತೆರಡು ಲಕ್ಷ ವರ್ಷಗಳ ಆಯಸ್ಸುಳ್ಳವನೂ, ಎಪ್ಪತ್ತು ಧನಸ್ಸುಗಳಷ್ಟು ಉನ್ನತನೂ ಆಗಿದ್ದನು.
ಮಗುವು ಬೆಳೆದು ದೊಡ್ಡವನಾಗಿ ಬಹುಕಾಲ ರಾಜ್ಯವಾಳುತ್ತಿದ್ದು, ವೈರಾಗ್ಯದಿಂದ ಪರಿನಿಷ್ಕ್ರಮಣ ಕಲ್ಯಾಣವನ್ನು ಕೈಕೊಂಡು, ಮನೋಹರೋದ್ಯಾನದಲ್ಲಿ ಫಾಲ್ಗುಣ ಕೃಷ್ಣ ಚತುರ್ದಶಿಯ ವಿಶಾಖಾ ನಕ್ಷತ್ರದಂದು ಸಾಮಯಿಕವನ್ನು ಕೈಕೊಂಡು ಮನಃ ಪರ್ಯಯಜ್ಞಾನಿಯಾದನು. ಮಹಾ ನಗರದ ಸುಂದರ ರಾಜನಿಂದ ಆಹಾರ ದಾನವನ್ನು ಪಡೆದು ಛದ್ಮಾವಸ್ಥೆಯಲ್ಲಿ ಕಾಲವನ್ನು ಕಳೆದ ಮೇಲೆ ದೀಕ್ಷಾವನ ಕದಂಬ ವೃಕ್ಷದಡಿಯಲ್ಲಿ ಉಪವಾಸವನ್ನು ಕೈಕೊಂಡು ಮಾಘ ಶುಕ್ಲ ದ್ವಿತೀಯೆಯ ಸಾಯಂಕಾಲ ವಿಶಾಖಾ ನಕ್ಷತ್ರದಲ್ಲಿ ಕೇವಲ ಜ್ಞಾನಿಯಾದನು. ಧರ್ಮವರ್ಷಣದಿಂದ ಆರ್ಯಕ್ಷೇತ್ರವನ್ನು ತಣಿಸಿದ ಸ್ವಾಮಿಯು ಮನೋಹರೋದ್ಯಾನದಲ್ಲಿ ಭಾದ್ರಪದ ಶುಕ್ಲ ಚತುರ್ದಶಿಯ ಸಾಯಂಕಾಲ ವಿಶಾಖಾ ನಕ್ಷತ್ರದಲ್ಲಿ ಮುಕ್ತಿಯನ್ನು ಪಡೆದನು.
ವಾಸುಪೂಜ್ಯ ಸ್ವಾಮಿಯೊಡನೆ ಅರವತ್ತಾರು ಜನ ಗಣಧರರಿದ್ದರು. ಆತನ ಲಾಂಛನ ಮಹಿಷ; ಯಕ್ಷ-ಯಕ್ಷಿಯರ ಕುಮಾರ-ಗಾಂಧಾರೀ. ಈತನ ಕಾಲದಲ್ಲಿ ದ್ವಿಪೃಷ್ಠನೆಂಬ ಎರಡನೆಯ ಅರ್ಧ ಚಕ್ರವರ್ತಿ ಇದ್ದನು.