ಶಬ್ದ ಬ್ರಹ್ಮ ಅಥವಾ ನಾದ ಬ್ರಹ್ಮ ಅಂದರೆ ಅತೀಂದ್ರಿಯ ಶಬ್ದ (ಶತಪಥ ಬ್ರಾಹ್ಮಣ III.12.48) ಅಥವಾ ಧ್ವನಿ ಕಂಪನ (ಶತಪಥ ಬ್ರಾಹ್ಮಣ Vi.16.51) ಅಥವಾ ವೇದಗಳ ಅತೀಂದ್ರಿಯ ಧ್ವನಿ (ಶತಪಥ ಬ್ರಾಹ್ಮಣ Xi.21.36) ಅಥವಾ ವೈದಿಕ ಗ್ರಂಥಗಳ ಅತೀಂದ್ರಿಯ ಧ್ವನಿ (ಶತಪಥ ಬ್ರಾಹ್ಮಣ X.20.43).[೧]
ಶಬ್ದ ಅಂದರೆ ಧ್ವನಿಯಿಂದ ಅಭಿವ್ಯಕ್ತಿಗೊಂಡ ಪದ (ಮೌಖಿಕ) ಮತ್ತು ಅಂತಹ ಪದವು ಒಂದು ನಿರ್ದಿಷ್ಟ ಅರ್ಥವನ್ನು ತಿಳಿಸುವ ಸಹಜವಾದ ಶಕ್ತಿ ಹೊಂದಿದೆ. ನ್ಯಾಯ ಮತ್ತು ವೈಶೇಷಿಕ ಪರಂಪರೆಗಳ ಪ್ರಕಾರ, ಶಬ್ದ ಅಂದರೆ ಮೌಖಿಕ ಸಾಕ್ಷ್ಯ; ಸಂಸ್ಕೃತ ವ್ಯಾಕರಣಕಾರರಾದ ಯಾಸ್ಕ, ಪಾಣಿನಿ ಮತ್ತು ಕಾತ್ಯಾಯನರಿಗೆ, ಅದರರ್ಥ ಭಾಷೆ ಅಥವಾ ಮಾತಿನ ಒಂದು ಘಟಕ. ತಾತ್ವಿಕ ಪರಿಭಾಷೆಯಲ್ಲಿ ಈ ಪದ ಮೊದಲ ಸಲ ಮೈತ್ರಾಯಣೀಯ ಉಪನಿಷತ್ತಿನಲ್ಲಿ (ಶ್ಲೋಕ VI.22) ಕಾಣಿಸುತ್ತದೆ. ಇದು ಎರಡು ಬಗೆಯ ಬ್ರಹ್ಮದ ಬಗ್ಗೆ ಹೇಳುತ್ತದೆ - ಶಬ್ದ ಬ್ರಹ್ಮ ಮತ್ತು ಅಶಬ್ದ ಬ್ರಹ್ಮ. ಭರ್ತೃಹರಿಯು ಶಬ್ದದ ಸೃಜನಾತ್ಮಕ ಶಕ್ತಿ ಬಗ್ಗೆ ಹೇಳುತ್ತಾನೆ, ಬಹುದ್ವಾರಿ ಬ್ರಹ್ಮಾಂಡವು ಶಬ್ದ ಬ್ರಹ್ಮದ ಸೃಷ್ಟಿ (ಬೃಹದಾರಣ್ಯಕ ಉಪನಿಷತ್ತು IV.i.2). ಮಾತನ್ನು ಬ್ರಹ್ಮದೊಂದಿಗೆ ಸಮವೆಂದು ನಿರೂಪಿಸಲಾಗುತ್ತದೆ (ಶತಪಥ ಬ್ರಾಹ್ಮಣ 2.1.4.10). ಬ್ರಹ್ಮ ವಾಕ್ನಷ್ಟು ದೂರ ವ್ಯಾಪಿಸುತ್ತದೆ ಎಂದು ಋಗ್ವೇದವು ಹೇಳುತ್ತದೆ (ಋಕ್.X.114.8), ಮತ್ತು ಸೃಷ್ಟಿಕರ್ತವಾಗಿ ಮಾತನ್ನು ಹೊಗಳುವ (ಋಕ್.X.71.7) ಮತ್ತು ಬ್ರಹ್ಮದ ಅಂತಿಮ ವಾಸಸ್ಥಾನ (ಋಕ್.I.164.37) ಎಂಬ ಶ್ಲೋಕಗಳನ್ನು ಹೊಂದಿದೆ. ಕಾಲವು ಶಬ್ದ ಬ್ರಹ್ಮದ ಸೃಜನಾತ್ಮಕ ಶಕ್ತಿ.[೨]
ಪೂರ್ವ ಮೀಮಾಂಸ ಶಬ್ದ ಬ್ರಹ್ಮಕ್ಕೆ ಸಂಬಂಧಪಡುತ್ತದೆ. ಇದರಲ್ಲಿ ಹೆಸರುಗಳು ಮತ್ತು ರೂಪಗಳನ್ನು ಕೊಡಲಾಗಿದೆ ಮತ್ತು ವೈದಿಕ ಪ್ರಕಟನಗಳಾಗಿ (ಮಂತ್ರಗಳು, ಶ್ಲೋಕಗಳು, ಪ್ರಾರ್ಥನೆಗಳು ಇತ್ಯಾದಿ). ವೇದಾಂತ ಪರಮ ಬ್ರಹ್ಮಕ್ಕೆ ಸಂಬಂಧಪಡುತ್ತದೆ. ಇದು ಅತೀಂದ್ರಿಯವಾಗಿದೆ ಮತ್ತು ನಾಮ ಹಾಗೂ ರೂಪರಹಿತವಾಗಿದೆ. ಪರಮ ಬ್ರಹ್ಮವನ್ನು ಅರಿತುಕೊಳ್ಳುವ ಮೊದಲು ಒಬ್ಬರು ಶಬ್ದ ಬ್ರಹ್ಮದಲ್ಲಿ ಚೆನ್ನಾಗಿ ನೆಲೆಗೊಳ್ಳಬೇಕು. ವೇದಗಳು ಸಾಂಪ್ರದಾಯಿಕ ಭಾಷೆಯ ಉತ್ಪನ್ನಗಳಲ್ಲ, ಬದಲಿಗೆ ಶಬ್ದದ ರೂಪದಲ್ಲಿ ವಾಸ್ತವದ ಹೊರಹೊಮ್ಮುವಿಕೆ. ಶಬ್ದವೇ ಸೃಷ್ಟಿಯ ಏಕೈಕ ಕಾರಣ ಮತ್ತು ಶಾಶ್ವತವಾಗಿದೆ. ಒಂದು ನಿಗೂಢ ಬೋಧನ ಶಾಖೆಯಾದ ಪೂರ್ವ ಮೀಮಾಂಸವು ಅಧ್ಯಾತ್ಮಿಕ ಬೆಳವಣಿಗೆಯ ದೃಷ್ಟಿಯಿಂದ ಶಬ್ದ ಬ್ರಹ್ಮವನ್ನು ಅರಿತುಕೊಂಡು ಸ್ವರ್ಗ ಸುಖವನ್ನು ಪಡೆಯುವ ಗುರಿಹೊಂದಿದೆ. ಇದು ಇಂದ್ರಿಯಗಳು ಮತ್ತು ಮನಸ್ಸನ್ನು ನಿಯಂತ್ರಿಸಲು ನೆರವಾಗುವ ಯಜ್ಞಗಳನ್ನು ಮಾಡಿ ನೆರವೇರುತ್ತದೆ; ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿದಾಗ ಒಳಗಿನ ಸೂಕ್ಷ್ಮ ಧ್ವನಿ ಶಬ್ದ ಬ್ರಹ್ಮವಾಗಿ ಸಿದ್ಧಿಯಾಗುತ್ತದೆ.