ಸ್ವಾಮಿ ಶಿವಾನಂದ | |
---|---|
![]() | |
ಜನನ | ಬರಾಸತ್, ಬಂಗಾಳ, ಬ್ರಿಟಿಷ್ ಭಾರತ (ಈಗ ಪಶ್ಚಿಮ ಬಂಗಾಳ, ಭಾರತ) | ೧೬ ಡಿಸೆಂಬರ್ ೧೮೫೪
ಮರಣ | 20 February 1934 ಬೇಲೂರು ಮಠ, ಬಂಗಾಳ, ಬ್ರಿಟಿಷ್ ಭಾರತ (ಈಗ ಪಶ್ಚಿಮ ಬಂಗಾಳ, ಭಾರತ) | (aged 79)
ಜನ್ಮ ನಾಮ | ತಾರಕ್ ನಾಥ್ ಘೋಸಲ್ |
Order | ರಾಮಕೃಷ್ಣ ಮಿಷನ್ |
ಗುರು | ಶ್ರೀ ರಾಮಕೃಷ್ಣ |
ತತ್ವಶಾಸ್ತ್ರ | ಅದ್ವೈತ ವೇದಾಂತ |
ಪ್ರಮುಖ ಶಿಷ್ಯರು/ಅನುಯಾಯಿಗಳು | ಸ್ವಾಮಿ ಗಂಭೀರಾನಂದ ಸ್ವಾಮಿ ತಪಸ್ಯಾನಂದ ಸ್ವಾಮಿ ರಂಗನಾಥಾನಂದ ಸ್ವಾಮಿ ರುದ್ರಾನಂದ ಕಮಲಾ ನೆಹರು |
ಸ್ವಾಮಿ ಶಿವಾನಂದ (೧೮೫೪-೧೯೩೪)ಇವರು ತಾರಕ್ ನಾಥ್ ಘೋಸಲ್ ಎಂಬ ಹೆಸರಿನಿಂದ ಜನಿಸಿದ್ದು, ಹಿಂದೂ ಆಧ್ಯಾತ್ಮಿಕ ನಾಯಕ ಮತ್ತು ರಾಮಕೃಷ್ಣ ಅವರ ಶಿಷ್ಯರಾಗಿದ್ದರು. ಇವರು ರಾಮಕೃಷ್ಣ ಮಿಷನ್ನ ಎರಡನೇ ಅಧ್ಯಕ್ಷರಾದರು. ಅವರ ಭಕ್ತರು ಅವರನ್ನು ಮಹಾಪುರುಷ ಮಹಾರಾಜ್ (ಮಹಾನ್ ಆತ್ಮ) ಎಂದು ಕರೆಯುತ್ತಾರೆ. ಶಿವಾನಂದರು ಮತ್ತು ಸುಬೋಧಾನಂದರು ರಾಮಕೃಷ್ಣರ ಶಿಷ್ಯರಾಗಿದ್ದು, ಬ್ರಹ್ಮಜ್ಞಾನಿಗಳಾಗಿದ್ದರು ("ಬ್ರಾಹ್ಮಣ ಅಥವಾ ಪರಮಾತ್ಮನನ್ನು ಬಲ್ಲವರು").[೧] ಶಿವಾನಂದ ಅವರು ತಮ್ಮ ಸಹೋದರ ಸನ್ಯಾಸಿಗಳ ಜನ್ಮದಿನದ ಆಚರಣೆಯನ್ನು ಪರಿಚಯಿಸಿದರು. ವಿಜ್ಞಾನಾನಂದರು ವಿನ್ಯಾಸಗೊಳಿಸಿದ ಬೇಲೂರು ಮಠದ ಶ್ರೀ ರಾಮಕೃಷ್ಣ ದೇವಸ್ಥಾನದ ಶಂಕುಸ್ಥಾಪನೆಯನ್ನು ಶಿವಾನಂದ ಅವರು ಮಾಡಿದರು ಎಂದು ತಿಳಿದುಬಂದಿದೆ.
ಶಿವಾನಂದ ಅವರು ಬಂಗಾಳದ ಬರಾಸತ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ರಾಮಕನೈ ಘೋಷಾಲ್. ಇವರು ಧರ್ಮನಿಷ್ಠ ಬ್ರಾಹ್ಮಣರಾಗಿದ್ದು, ವಕೀಲರಾಗಿ ಗಣನೀಯ ಆದಾಯವನ್ನು ಹೊಂದಿದ್ದರು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತಂತ್ರದ ಅನುಯಾಯಿಯಾಗಿದ್ದರು. ಶಿವಾನಂದ ಅವರ ತಂದೆ, ತಾಯಿ ಹಾಗೂ ಮೊದಲ ಪತ್ನಿ ವಾಮಸುಂದರಿ ದೇವಿ ಇಪ್ಪತ್ತೈದರಿಂದ ಮೂವತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯನ್ನು ಒದಗಿಸಿದರು. ರಾಮಕನೈ ಅವರು ರಾಮಕೃಷ್ಣರನ್ನು ವೈಯಕ್ತಿಕವಾಗಿ ತಿಳಿದಿದ್ದರು.[೨] ಏಕೆಂದರೆ, ಅವರು ವ್ಯವಹಾರದ ವಿಷಯಗಳಲ್ಲಿ ದಕ್ಷಿಣೇಶ್ವರಕ್ಕೆ ಭೇಟಿ ನೀಡುತ್ತಿದ್ದರು.
ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಶಿವಾನಂದರವರು ತಮ್ಮ ತಂದೆಗೆ ಸಹಾಯ ಮಾಡಲು ಕಲ್ಕತ್ತಾದಲ್ಲಿ ಮ್ಯಾಕಿನನ್ ಮ್ಯಾಕೆಂಝಿ ಅವರೊಂದಿಗೆ ಕೆಲಸವನ್ನು ಪಡೆದರು.
ಮೇ ೧೮೮೦ ರಂದು, ರಾಮಚಂದ್ರ ದತ್ತಾ ಅವರ ಮನೆಯಲ್ಲಿ ಶಿವಾನಂದರವರು ಮೊದಲ ಬಾರಿಗೆ ರಾಮಕೃಷ್ಣರನ್ನು ನೋಡಿದರು. ಕೆಲವು ದಿನಗಳ ನಂತರ, ಅವರು ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಲು ದಕ್ಷಿಣೇಶ್ವರಕ್ಕೆ ಹೋದರು. ಅಂದಿನಿಂದ ಅವರು ರಾಮಕೃಷ್ಣರ ಮಾರ್ಗದರ್ಶನದಲ್ಲಿ ತೀವ್ರವಾದ ಪ್ರಾರ್ಥನೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ನಂತರ, ಅವರು: " ರಾಮಕೃಷ್ಣರು ಒಬ್ಬ ಮನುಷ್ಯನೋ ಅಥವಾ ಮಹಾಮಾನವನೋ ಅಥವಾ ಸ್ವತಃ ದೇವರೋ ಎಂಬ ಅಂತಿಮ ತಿಳುವಳಿಕೆಗೆ ನಾನು ಇನ್ನೂ ಬಂದಿಲ್ಲ. ಆದರೆ, ಅವರು ಸಂಪೂರ್ಣ ಆತ್ಮನಿರ್ಭರ, ಅತ್ಯುನ್ನತ ತ್ಯಾಗದ ಒಡೆಯ, ಅತ್ಯುನ್ನತ ಬುದ್ಧಿವಂತಿಕೆಯನ್ನು ಹೊಂದಿರುವ ಮತ್ತು ಪ್ರೀತಿಯ ಸರ್ವೋಚ್ಚ ಅವತಾರ ಎಂದು ನನಗೆ ತಿಳಿದಿದೆ" ಎಂದು ಹೇಳಿದರು.
ಶಿವಾನಂದರವರು ೧೮೮೧-೮೨ ರಲ್ಲಿ, ವಿವಾಹವಾದರು. ಅವರ ತಂದೆಯು ತಮ್ಮ ಸಹೋದರಿಯ ಮದುವೆಗೆ ವರದಕ್ಷಿಣೆ ನೀಡಲು ಸಾಧ್ಯವಾಗದ ಕಾರಣದಿಂದ ಭಾವಿ ವರನ ಕುಟುಂಬದ ಮಗಳನ್ನು ಮದುವೆಯಾಗಲು ಒಪ್ಪಿಕೊಂಡರು. ಮೂರು ವರ್ಷಗಳ ನಂತರ, ಅವರ ಪತ್ನಿ ನಿಧನರಾದರು ಮತ್ತು ಶಿವಾನಂದರವರು ಬಾರಾನಗರ್ ಮಠ ಪ್ರಾರಂಭವಾಗುವವರೆಗೂ ಕೆಲವೊಮ್ಮೆ ಭಕ್ತರ ಮನೆಯಲ್ಲಿ ಮತ್ತು ಕೆಲವೊಮ್ಮೆ ಒಂಟಿ ಸ್ಥಳಗಳಲ್ಲಿ ವಾಸಿಸಲು ಪ್ರಾರಂಭಿಸಿದರು.
ರಾಮಕೃಷ್ಣರು ಅನಾರೋಗ್ಯಕ್ಕೆ ಒಳಗಾಗುವವರೆಗೂ ಶಿವಾನಂದರವರು ದಕ್ಷಿಣೇಶ್ವರಕ್ಕೆ ಭೇಟಿ ನೀಡುತ್ತಲೇ ಇದ್ದರು ಮತ್ತು ಅವರನ್ನು ಮೊದಲು ಶ್ಯಾಮ್ಪುಕುರ್ ಮನೆಗೆ ಹಾಗೂ ಕಾಸಿಪೋರ್ ಗಾರ್ಡನ್ ಮನೆಗೆ ಕರೆತರಲಾಯಿತು. ಕಾಸಿಪೋರ್ನಲ್ಲಿ, ಶಿವಾನಂದರವರು ರಾಮಕೃಷ್ಣರ ಸೇವೆ ಮಾಡುತ್ತಾ ಸ್ವಾಮಿ ವಿವೇಕಾನಂದರು ಸೇರಿದಂತೆ ಇತರರೊಂದಿಗೆ ಸೇರಿಕೊಂಡರು.
೧೮೮೬ ರಲ್ಲಿ, ರಾಮಕೃಷ್ಣರ ಮರಣದ ನಂತರ, ಸನ್ಯಾಸ ಜೀವನವನ್ನು ಸ್ವೀಕರಿಸಲು ನಿರ್ಧರಿಸಿದ ಶಿಷ್ಯರ ಸಣ್ಣ ಗುಂಪು ಬಾರಾನಗರದ ಪಾಳುಬಿದ್ದ ಮನೆಯಲ್ಲಿ ಒಟ್ಟುಗೂಡಿತು. ಅಲ್ಲಿ ನೆಲೆಸಿದವರಲ್ಲಿ ಶಿವಾನಂದರವರು ಮೊದಲಿಗರು. ಹೀಗೆ, ರಾಮಕೃಷ್ಣ ಮಠದ ಬಾರಾನಗರ ಮಠ ಪ್ರಾರಂಭವಾಯಿತು.[೩]
ಶಿವಾನಂದರು ತಮ್ಮ ಪ್ರವಾಸದ ಅವಧಿಯಲ್ಲಿ ಉತ್ತರ ಭಾರತದಾದ್ಯಂತ ಸಂಚರಿಸುತ್ತಾ ಅಲ್ಮೋರಕ್ಕೆ ಹೋದರು. ಅಲ್ಲಿ ಅವರಿಗೆ ರಾಮಕೃಷ್ಣರ ಶಿಷ್ಯರ ಅಭಿಮಾನಿಯಾಗಿದ್ದ ಸ್ಥಳೀಯ ಶ್ರೀಮಂತ ಲಾಲಾ ಬದ್ರಿಲಾಲ್ ಷಾ ಅವರ ಪರಿಚಯವಾಯಿತು. ೧೮೯೩ ರ ಉತ್ತರಾರ್ಧದಲ್ಲಿ, ಶಿವಾನಂದರವರು ಥಿಯೋಸಾಫಿಯಲ್ಲಿ ಆಸಕ್ತಿ ಹೊಂದಿದ್ದ ಇಂಗ್ಲಿಷ್ ವ್ಯಕ್ತಿ ಇ.ಟಿ.ಸ್ಟ್ರಾಡಿ ಅವರನ್ನು ಭೇಟಿಯಾದರು. ನಂತರ, ಅವರು ಇಂಗ್ಲೆಂಡ್ನಲ್ಲಿ ವಿವೇಕಾನಂದರನ್ನು ಭೇಟಿಯಾದ ನಂತರ ಅವರ ಅಭಿಮಾನಿ ಮತ್ತು ಅನುಯಾಯಿಯಾದರು.[೪] ಅವರು ಚಿಂತನಶೀಲ ಜೀವನವನ್ನು ನಡೆಸುವತ್ತ ಒಲವು ಹೊಂದಿದ್ದರು ಮತ್ತು ಹಲವಾರು ಬಾರಿ ಹಿಮಾಲಯಕ್ಕೆ ಹೋದರು. ಅವರು ೧೯೦೯ ರಲ್ಲಿ, ಸ್ವಾಮಿ ತುರಿಯಾನಂದ ಅವರೊಂದಿಗೆ ಅಮರನಾಥಕ್ಕೆ ಹೋದರು.
೧೮೯೭ ರಲ್ಲಿ, ವಿವೇಕಾನಂದರು ಭಾರತಕ್ಕೆ ಹಿಂದಿರುಗಿದಾಗ ಶಿವಾನಂದರವರ ಜೀವನ ಕೊನೆಗೊಂಡಿತು. ಅವರು ವಿವೇಕಾನಂದರನ್ನು ಸ್ವಾಗತಿಸಲು ಮದ್ರಾಸ್ಗೆ ಹೋದರು ಮತ್ತು ಅವರೊಂದಿಗೆ ಕಲ್ಕತ್ತಾಗೆ ಮರಳಿದರು. ವಿವೇಕಾನಂದರು ಶಿವಾನಂದರನ್ನು ಈಗ ಶ್ರೀಲಂಕಾದಲ್ಲಿರುವ ಸಿಲೋನ್ಗೆ ವೇದಾಂತವನ್ನು ಹರಡಲು ಕಳುಹಿಸಿದರು. ಅಲ್ಲಿ ಅವರು ಗೀತೆ ಮತ್ತು ರಾಜಯೋಗದ ಬಗ್ಗೆ ತರಗತಿಗಳನ್ನು ನಡೆಸಿದರು. ಅವರು ೧೮೯೮ ರಲ್ಲಿ, ಬೇಲೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ರಾಮಕೃಷ್ಣ ಮಠಕ್ಕೆ ಮರಳಿದರು. ೧೮೯೯ ರಲ್ಲಿ, ವಿವೇಕಾನಂದರ ಕೋರಿಕೆಯ ಮೇರೆಗೆ, ಕಲ್ಕತ್ತಾದಲ್ಲಿ ಪ್ಲೇಗ್ ಹರಡಿದಾಗ ಪರಿಹಾರ ಕಾರ್ಯಗಳನ್ನು ಸಂಘಟಿಸಲು ಶಿವಾನಂದರು ಸಹಾಯ ಮಾಡಿದರು. ೧೯೦೦ ರಲ್ಲಿ, ಅವರು ವಿವೇಕಾನಂದರೊಂದಿಗೆ ಮಾಯಾವತಿಗೆ ಪ್ರಯಾಣಿಸಿದರು. ದಿಯೋಘರ್ನ ರಾಮಕೃಷ್ಣ ಮಿಷನ್ ವಿದ್ಯಾಪೀಠದಲ್ಲಿ ಅವರ ಗೌರವಾರ್ಥವಾಗಿ ಶಿವಾನಂದ ಧಾಮ್ ಎಂಬ ವಸತಿ ನಿಲಯವಿದೆ.
೧೯೦೨ ರಲ್ಲಿ, ವಿವೇಕಾನಂದರ ಸಾವಿಗೆ ಸ್ವಲ್ಪ ಮೊದಲು, ಭಿಂಗಾದ ರಾಜನು ವಿವೇಕಾನಂದರಿಗೆ ನೀಡಿದ ದೇಣಿಗೆಯನ್ನು ಬಳಸಿಕೊಂಡು ಅದ್ವೈತ ಆಶ್ರಮವನ್ನು ಪ್ರಾರಂಭಿಸಲು ಅವರು ವಾರಣಾಸಿಗೆ ಹೋದರು. ಅಲ್ಲಿ ಅವರು ಏಳು ವರ್ಷಗಳ ಕಾಲ ಮುಖ್ಯಸ್ಥರಾಗಿ ಉಳಿದರು. ಅಲ್ಲಿ ಹಣದ ಸಮಸ್ಯೆಯಿಂದ ಕಠಿಣವಾಗಿ ಬದುಕಿದರು. ಈ ಸಮಯದಲ್ಲಿ, ಅವರು ವಿವೇಕಾನಂದರ ಚಿಕಾಗೋ ಉಪನ್ಯಾಸಗಳನ್ನು ಸ್ಥಳೀಯ ಹಿಂದಿ ಭಾಷೆಗೆ ಅನುವಾದಿಸಿದರು. ಅವರು ೧೯೦೯ ರವರೆಗೆ ಆಶ್ರಮದ ವ್ಯವಹಾರಗಳನ್ನು ನೋಡಿಕೊಳ್ಳುವುದನ್ನು ಮುಂದುವರೆಸಿದರು.
೧೯೧೦ ರಲ್ಲಿ, ರಾಮಕೃಷ್ಣ ಮಿಷನ್ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಿವಾನಂದ ಅವರು ಬೇಲೂರು ಮಠದ ಮೂಲ ಟ್ರಸ್ಟ್ಗಳಲ್ಲಿ ಒಬ್ಬರಾಗಿದ್ದರು. ೧೯೧೭ ರಲ್ಲಿ, ಬಾಬುರಾಮ್ ಮಹಾರಾಜ್ (ಸ್ವಾಮಿ ಪ್ರೇಮಾನಂದ) ಅನಾರೋಗ್ಯದಿಂದ ನಿಧನರಾದಾಗ, ಮಠ ಮತ್ತು ಮಿಷನ್ನ ವ್ಯವಹಾರಗಳನ್ನು ನಿರ್ವಹಿಸುವ ಅವರ ಕರ್ತವ್ಯಗಳು ಶಿವಾನಂದರ ಮೇಲೆ ಬಿದ್ದವು. ೧೯೨೨ ರಲ್ಲಿ, ಸ್ವಾಮಿ ಬ್ರಹ್ಮಾನಂದರ ಮರಣದ ನಂತರ, ಅವರು ರಾಮಕೃಷ್ಣ ಮಠ ಮತ್ತು ಮಿಷನ್ನ ಎರಡನೇ ಅಧ್ಯಕ್ಷರಾದರು. ಬ್ರಹ್ಮಾನಂದರಂತೆ, ಅವರು ತಮ್ಮ ದೈನಂದಿನ ಕೆಲಸದ ಜೊತೆಗೆ ಧ್ಯಾನಕ್ಕೆ ಒತ್ತು ನೀಡಿದರು. ಅವರು ಪೂರ್ವ ಬಂಗಾಳದ ಢಾಕಾ ಮತ್ತು ಮೈಮೆನ್ಸಿಂಗ್ಗೆ ಹೋಗಿ ಅನೇಕ ಆಧ್ಯಾತ್ಮಿಕ ಅನ್ವೇಷಕರಿಗೆ ದೀಕ್ಷೆ ನೀಡಿದರು. ೧೯೨೪ ಮತ್ತು ೧೯೨೭ ರಲ್ಲಿ, ಅವರು ದಕ್ಷಿಣಕ್ಕೆ ಎರಡು ದೀರ್ಘ ಪ್ರವಾಸಗಳನ್ನು ಕೈಗೊಂಡರು ಮತ್ತು ಊಟಕಮುಂಡ್ನಲ್ಲಿ ರಾಮಕೃಷ್ಣ ಮಠವನ್ನು ಬಾಂಬೆ ಮತ್ತು ನಾಗ್ಪುರದಲ್ಲಿ ಸ್ಥಾಪಿಸಿದರು. ೧೯೨೫ ರಲ್ಲಿ, ಅವರು ದಿಯೋಘರ್ಗೆ ಹೋಗಿ ರಾಮಕೃಷ್ಣ ಮಿಷನ್ನ ಸ್ಥಳೀಯ ಅಧ್ಯಾಯಕ್ಕಾಗಿ ಹೊಸ ಕಟ್ಟಡವನ್ನು ತೆರೆದರು.
ಶಿವಾನಂದರವರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ವಿವಾಹವಾದರು. ಆದರೆ, ಅವರ ಯುವ ಹೆಂಡತಿಯ ಒಪ್ಪಿಗೆಯೊಂದಿಗೆ, ಅವರು ಸಂಪೂರ್ಣವಾಗಿ ಬ್ರಹ್ಮಚರ್ಯ ಜೀವನವನ್ನು ನಡೆಸಿದರು.[೫] ಅದಕ್ಕಾಗಿಯೇ ಬೇಲೂರು ಮಠದ ಸ್ಥಾಪನೆಯ ನಂತರ, ಅವರನ್ನು ಸ್ವಾಮಿ ವಿವೇಕಾನಂದರು 'ಮಹಾಪುರುಷ್ ಮಹಾರಾಜ್' ಎಂದು ಕರೆದರು. 'ಮಹಾಪುರುಷ್' ಎಂದರೆ 'ಮಹಾನ್ ವ್ಯಕ್ತಿ'.
೧೯೩೦ ರಿಂದ ಶಿವಾನಂದರ ಆರೋಗ್ಯ ಕ್ಷೀಣಿಸಿತು. ಏಪ್ರಿಲ್ ೧೯೩೩ ರಲ್ಲಿ, ಅವರು ಪಾರ್ಶ್ವವಾಯುವಿಗೆ ಒಳಗಾದರು. ೧೯೩೪ ರ ಫೆಬ್ರವರಿ ೨೦ ರಂದು, ರಾಮಕೃಷ್ಣರ ಜನ್ಮದಿನದ ಕೆಲವೇ ದಿನಗಳ ನಂತರ, ಶಿವಾನಂದರು ನಿಧನರಾದರು. ಬೇಲೂರು ಮಠದ ಹಳೆಯ ದೇವಾಲಯದ ಪಕ್ಕದ ಸಣ್ಣ ಕೋಣೆಯನ್ನು 'ಶಿವಾನಂದರ ಕೋಣೆ' ಎಂದು ಕರೆಯಲಾಯಿತು.
ಶಿವಾನಂದರ ಅಧ್ಯಕ್ಷತೆಯಲ್ಲಿ, ರಾಮಕೃಷ್ಣ ಮಿಷನ್ ನಿಧಾನವಾಗಿ ಇತರ ಸ್ಥಳಗಳಿಗೆ ವಿಸ್ತರಿಸಿತು. ಅವರು ಊಟಕಮಂಡ್, ನಾಗ್ಪುರ ಮತ್ತು ಬಾಂಬೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಿಧ ವಿದೇಶಗಳಲ್ಲಿ ಕೇಂದ್ರಗಳನ್ನು ತೆರೆಯಲಾಯಿತು. ೧೯೧೫ ರಲ್ಲಿ, ಅವರು ಅಲ್ಮೋರದಲ್ಲಿ ರಾಮಕೃಷ್ಣ ಮಿಷನ್ ಕೇಂದ್ರವನ್ನು ಸ್ಥಾಪಿಸಿದರು. ಬ್ರಹ್ಮಾನಂದರ ಮರಣದ ನಂತರ ಅವನು ಅನೇಕ ಜನರಿಗೆ ದೀಕ್ಷೆ ನೀಡಿದನು.
ಶಿವಾನಂದ ಅವರು ಅನಾರೋಗ್ಯಪೀಡಿತ ಖೈದಿಯೊಬ್ಬರ ಕೊಳೆತ ಬಟ್ಟೆಗಳನ್ನು ಬನಾರಸ್ನಲ್ಲಿರುವ ತಮ್ಮ ಮಠಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅವರು ಬನಾರಸ್ನಲ್ಲಿ ಬಡ ಮಕ್ಕಳಿಗಾಗಿ ಉಚಿತ ನರ್ಸರಿ ಶಾಲೆಯನ್ನು ಪ್ರಾರಂಭಿಸಿದರು. ಬ್ರಹ್ಮಾನಂದರ ಮರಣದ ನಂತರ, ಶಿವಾನಂದರು ತಮ್ಮನ್ನು ತಾವು ಬ್ರಹ್ಮಾನಂದರ ಪ್ರತಿನಿಧಿ ಎಂದು ಭಾವಿಸಿದ್ದರಿಂದ ತಮ್ಮನ್ನು ರಾಮಕೃಷ್ಣ ಮಿಷನ್ನ ಅಧ್ಯಕ್ಷ ಎಂದು ಘೋಷಿಸಲು ನಿರಾಕರಿಸಿದರು. ಅವರು ಸನ್ಯಾಸಿ ಜೀವನದಲ್ಲಿ ಶಿಸ್ತುಗಳ ಪರವಾಗಿದ್ದರು ಮತ್ತು ಅವರು ದೈಹಿಕವಾಗಿ ಅಸಮರ್ಥರಾಗುವವರೆಗೂ ಅವುಗಳನ್ನು ಕಟ್ಟುನಿಟ್ಟಾಗಿ ಅಭ್ಯಾಸ ಮಾಡಿದರು.