ಲೇಖಕ | ಚಿಂತಾಮಣಿ |
---|---|
ದೇಶ | ಭಾರತ |
ಭಾಷೆ | ಸಂಸ್ಕೃತ |
ಪ್ರಕಾರ | ದಂತ ಕತೆಗಳು |
ಪ್ರಕಟವಾದ ದಿನಾಂಕ | ಕ್ರಿ.ಶ ಹನ್ನೆರಡನೆಯ ಶತಮಾನ |
ಸಂಸ್ಕೃತದಲ್ಲಿ "ಶುಕ" ಎಂದರೆ ಗಿಳಿ ಎಂದೂ "ಸಪ್ತತಿ" ಎಂದರೆ ಎಪ್ಪತ್ತು ಎಂದು ಅರ್ಥವಿದೆ. ಮೂಲತಃ ಸಂಸ್ಕೃತದಲ್ಲಿ ರಚನೆಯಾದ "ಶುಕಸಪ್ತತಿ" ಯಲ್ಲಿ ಗಿಳಿಯು ತನ್ನ ಒಡತಿಗೆ ಹೇಳುವುದು ಎನ್ನುವ ಪರಿಕಲ್ಪನೆಯ ಎಪ್ಪತ್ತು ಕತೆಗಳಿವೆ. ಇಲ್ಲಿ ಗಿಳಿಯ ಒಡೆಯ ವ್ಯಾಪಾರಕ್ಕಾಗಿ ಬೇರೆ ನಾಡಿಗೆ ತೆರಳಿರುವಾಗ ಅದರ ಒಡತಿಗೆ ತನ್ನ ಪ್ರಿಯಕರನನ್ನು ಭೇಟಿ ಮಾಡುವ ಬಯಕೆ ಕಾಡುತ್ತಿರುತ್ತಿದೆ. ಗಿಳಿಯ ಒಡತಿಯ ಮನಸಿನಲ್ಲಿ ತನ್ನ ಪ್ರಿಯಕರನ ಬಗೆಗಿನ ಬಯಕೆ ಮೂಡುವುದನ್ನು ತಡೆಯಲು ಗಿಳಿ ಪ್ರತೀದಿನ ಒಂದೊಂದು ಕತೆ ಹೇಳುತ್ತಿರುತ್ತದೆ. ಆ ಕತೆಯ ಮೂಲಕ ತನ್ನ ಒಡತಿಯ ಸಂಸಾರ ಹಾಳಾಗದಂತೆ ಕಾಪಾಡಲು ಗಿಳಿ ಪ್ರಯತ್ನಿಸುತ್ತಿರುತ್ತದೆ. ಎಪ್ಪತ್ತು ದಿನಗಳ ನಂತರ ಒಡೆಯ ಮನೆಗೆ ಮರಳಿ ತನ್ನ ಪತ್ನಿಯನ್ನು ಸೇರುತ್ತಾನೆ. ಸಂಸಾರ ಧರ್ಮ, ಸಂಸಾರದ ಮೌಲ್ಯಗಳು, ನೈತಿಕತೆ ಮುಂತಾದ ಮೌಲ್ಯಗಳು ಈ ಎಪ್ಪತ್ತು ಕತೆಗಳಲ್ಲಿದೆ.
ಇಲ್ಲಿರುವ ಕತೆಗಳಲ್ಲಿ ಕೆಲವು ಈಗಾಗಲೇ ಪ್ರಖ್ಯಾತವಾಗಿರುವ ಬೇರೆ ಕೃತಿಗಳಲ್ಲಿರುವ ಕತೆಗಳ ಪುನರಾವರ್ತನೆಯಾಗಿವೆ. ಈ ಕೃತಿಯನ್ನು ಯಾವಾಗ ಬರೆಯಲಾಯಿತು ಎಂಬುದಕ್ಕೆ ನಿಖರ ದಾಖಲೆಗಳಿಲ್ಲದಿದ್ದರೂ ಹೆಚ್ಚಿನ ವಿದ್ವಾಂಸರು ಇದು ಕ್ರಿ.ಶ ಹನ್ನೆರಡನೆಯ ಶತಮಾನದ ರಚನೆ ಎಂದು ಅಭಿಪ್ರಾಯಪಡುತ್ತಾರೆ. ಈ ಕೃತಿಯ ಬಗ್ಗೆ ಇರುವ ಅತ್ಯಂತ ಹಳೆಯ ಹಸ್ತಪ್ರತಿ ಹದಿನೈದನೇ ಶತಮಾನದ್ದಾಗಿದೆ. ಇದನ್ನು ಪರ್ಶಿಯನ್, ಮಲಯ ಮುಂತಾದ ಹಲವು ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಇದನ್ನು ೨೦೦೦ನೇ ಇಸ್ವಿಯಲ್ಲಿ ಇಂಗ್ಲೀಷಿಗೆ ಭಾಷಾಂತರಿಸಲಾಗಿದೆ.
ಈ ಕಥಾ ಸಂಕಲನದಲ್ಲಿ ಕತೆಯ ಒಳಗೊಂದು ಕತೆ ಇರುವಂತಹ ಸ್ವರೂಪ ಇದೆ [೧] ಒಂದು ಕತೆಯೊಂದಿಗೆ ಮತ್ತೊಂದು ಕತೆಯ ಸಂಬಂಧವನ್ನು ಮುಂದುವರಿಸಲು ಈ ಕೃತಿಯಲ್ಲಿ ೭೨ ಕತೆಗಳಿವೆ. ಅದರಲ್ಲಿ ಒಂದು ಮುಖ್ಯ ಕತೆ. ಉಳಿದ ೭೧ ಕತೆಗಳನ್ನು ಗಿಳಿ ತನ್ನ ಒಡತಿಗೆ ಹೇಳುವಂತೆ ಚಿತ್ರಿಸಲಾಗಿದೆ.
ಶ್ರೀಮಂತ ವರ್ತಕನೊಬ್ಬನ ಮಗ "ಮದನ ವಿನೋದ" ಮತ್ತು ಆತನ ಪತ್ನಿ "ಪದ್ಮಾವತಿ" ಈ ಕತೆಗಳ ಮುಖ್ಯ ಪಾತ್ರಧಾರಿಗಳು. ಮದನ ಮೋಹನನಿಗೆ ಆತನ ಬ್ರಾಹ್ಮಣ ಗೆಳೆಯನೊಬ್ಬ ಮಾತಾಡುವ ಗಿಳಿಯೊಂದನ್ನು ಕೊಡುತ್ತಾನೆ. ಆ ಗಿಳಿ ಆತನಿಗೆ ವ್ಯಾಪಾರಧರ್ಮದ ಬಗೆಗಿನ ಕತೆಗಳನ್ನು ಹೇಳುತ್ತಿರುತ್ತದೆ. ಆ ಕತೆಗಳಿಂದ ಪ್ರಭಾವಿತನಾದ ಆತನಿಗೆ ಕರ್ತವ್ಯದ ಅರಿವಾಗಿ ವ್ಯಾಪಾರಕ್ಕೋಸ್ಕರ ಪ್ರವಾಸ ಹೊರಡುತ್ತಾನೆ. ಆ ಪ್ರವಾಸದ ಸಂದರ್ಭದಲ್ಲಿ ಆತನ ಪತ್ನಿ ಪದ್ಮಾವತಿಯನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಹೊರಡುತ್ತಾನೆ.
ಪದ್ಮಾವತಿಗೆ ತನ್ನ ಗಂಡನ ಪ್ರವಾಸದಿಂದ ಬೇಸರ ಕಾಡುತ್ತಿರುತ್ತದೆ. ಆಗ ಆಕೆಗೆ ಸಿಕ್ಕ ಗೆಳತಿಯೊಬ್ಬಳು ಬೇಸರ ಕಳೆಯಲು ಪ್ರಿಯಕರನೊಬ್ಬನ ಬಳಿ ಹೋಗುವಂತೆ ತಿಳಿಸುತ್ತಾಳೆ. ಆಕೆಯ ಸಲಹೆಗೆ ಒಪ್ಪಿದ ಪದ್ಮಾವತಿ ಪ್ರತೀ ರಾತ್ರಿಯೂ ಪ್ರಿಯಕರನನ್ನು ಭೇಟಿಯಾಗಲು ಸಿದ್ದವಾಗುತ್ತಾಳೆ. ಆದರೆ ಪ್ರತೀ ರಾತ್ರಿಯೂ ಗಿಳಿ ಒಂದೊಂದು ಕತೆ ಹೇಳಿ ಪದ್ಮಾವತಿಯ ಮನಸ್ಸು ಆಕೆಯ ಪ್ರಿಯಕರನನ್ನು ಬೇಟಿಯಾಗದಂತೆ ತಡೆಯುತ್ತದೆ. ಈ ಕತೆಗಳಲ್ಲಿ ಗಿಳಿಯು ತನ್ನ ಒಡತಿಗಿರುವ ಲೈಂಗಿಕ ಬಯಕೆಗಳೇನೋ ಸರಿಯಿದೆ ಆದರೆ ಆ ಬಯಕೆಗಳಿಂದ ಏನಾದರೂ ಅನಾಹುತಗಳಾದರೆ ಅದನ್ನು ಎದುರಿಸುವ ಬುದ್ಧಿ ಆಕೆಗಿದೆಯೇ ಎಂದು ಆಕೆಯನ್ನು ಪ್ರಶ್ನಿಸುತ್ತದೆ. ಇಲ್ಲ ಎನ್ನುವ ಆಕೆ ಯಾವ ರೀತಿಯ ಅನಾಹುತಗಳಾಗುತ್ತದೆ ಎಂದು ತಿಳಿಯಲು ಆಸೆ ಪಡುತ್ತಾಳೆ. ಆಗ ಗಿಳಿ ಅದಕ್ಕೆ ಸಂಬಂಧಿಸಿದ ಕತೆಯೊಂದನ್ನು ಹೇಳುತ್ತದೆ. ಆ ದಿನದ ಕತೆಯನ್ನು ಕೇಳಿದ ಪದ್ಮಾವತಿ ಪ್ರಿಯಕರನನ್ನು ಭೇಟಿಯಾಗುವ ಆಸೆಯನ್ನು ಕೈಬಿಡುತ್ತಾಳೆ. ಮಾರನೆಯ ದಿನ ಇದೇ ರೀತಿ ಗಿಳಿ ಮತ್ತೊಂದು ಕತೆಯನ್ನು ಹೇಳುತ್ತದೆ. ಎಪ್ಪತ್ತು ದಿನಗಳ ನಂತರ ಮದನ ಮನೆಗೆ ಮರಳುತ್ತಾನೆ. ಆ ಹೊತ್ತಿಗೆ ಪದ್ಮಾವತಿಗೆ ತಾನು ಮಾಡಲು ಹೊರಟಿದ್ದ ಕೃತ್ಯಗಳು ಎಷ್ಟು ತಪ್ಪು ಎಂದು ಅರಿವಾಗುತ್ತದೆ. ಆಗ ಗಿಳಿಯ ಸಲಹೆಯಂತೆ ತನ್ನ ಮನಸಿನಲ್ಲಿ ಮೂಡುತ್ತಿದ್ದ ಬಯಕೆಗಳ ಬಗ್ಗೆ ಮತ್ತು ಗಿಳಿಯ ಸಲಹೆಯಂತೆ ಆತನನ್ನು ಭೇಟಿಯಾಗದಿದ್ದ ಬಗ್ಗೆ ಪದ್ಮಾವತಿ ಮದನನಿಗೆ ತಿಳಿಸುತ್ತಾನೆ. ಪದ್ಮಾವತಿಯ ಕೃತ್ಯಗಳಿಗೆ ಆಕೆಯ ಕೆಟ್ಟ ಸ್ನೇಹಿತೆಯ ಸಹವಾಸವೇ ಕಾರಣ ಎಂಬುದನ್ನು ಅರಿತ ಮದನ ಆಕೆಯನ್ನು ಕ್ಷಮಿಸಿ ಬಿಡುತ್ತಾನೆ.
ಈ ಕೃತಿಯನ್ನು ಪುಲವೇಕರಿ ಕದಿರಿಪತಿ ಅವರು ತೆಲುಗಿಗೆ ಭಾಷಾಂತರಿಸಿದ್ದಾರೆ. ಇದನ್ನು ವಾವಿಲ ರಾಮಸ್ವಾಮಿ ಸಾಸ್ತ್ರುಲು ಮತ್ತು ಮಕ್ಕಳು ಪ್ರಕಾಶನದವರು ೧೯೩೫ ಮತ್ತು ೧೯೫೧ರಲ್ಲಿ ಪ್ರಕಟಿಸಿದ್ದಾರೆ. .[೨] It was published by Andhra Pradesh Sahitya Akademi in 1979 under the editorship of B. Ramaraju.[೩]