Personal information | |
---|---|
Born | ಧಬುಲಿಯನ್, ಕಪುರ್ಥಲಾ |
Nationality | ಭಾರತೀಯ |
Career information | |
Playing career | ೧೯೭೬–೧೯೯೪ |
Career highlights and awards | |
ಮಹಾರಾಜಾ ರಣಜೀತ್ ಸಿ೦ಗ್ ಪ್ರಶಸ್ತಿ (೧೯೮೩) ಅರ್ಜುನ ಪ್ರಶಸ್ತಿ (೧೯೯೯) |
ಸಜ್ಜನ್ ಸಿ೦ಗ್ ಚೀಮಾರವರು ಭಾರತವನ್ನು ಪ್ರತಿನಿಧಿಸಿದ ಅತ್ಯುತ್ತಮ ಬ್ಯಾಸ್ಕೆಟ್-ಬಾಲ್ ಆಟಗಾರರಲ್ಲಿ ಒಬ್ಬರು. ಅವರು ಭಾರತವನ್ನು ೧೯೮೨ರಲ್ಲಿ ನವ ದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ್ದಲ್ಲದೇ, ೧೯೮೧, ೧೯೮೩, ಹಾಗೂ ೧೯೮೫ರಲ್ಲಿ ನಡೆದ ಏಷ್ಯನ್ ಬ್ಯಾಸ್ಕೆಟ್ಬಾಲ್ ಪ೦ದ್ಯಾವಳಿಗಳಲ್ಲು ಕೂಡ ಭಾರತ ದೇಶವನ್ನು ಪ್ರತಿನಿಧಿಸಿದ್ದರು.[೧]
ಸಜ್ಜನ್ ಸಿ೦ಗ್ ಅವರು ೧೫ ಜನವರಿ ೧೯೫೭ರಂದು ಪ೦ಜಾಬಿನಲ್ಲಿ ಇರುವ ಕಪುರ್ಥಲಾ ಜಿಲ್ಲೆಯ ಧಬುಲಿಯನ್ ಹಳ್ಳಿಯಲ್ಲಿ ಹುಟ್ಟಿದರು. ತಮ್ಮ ಶಾಲಾಜೀವನವನ್ನು ತಮ್ಮ ಜಿಲ್ಲೆಯ ಕಮಾಲಿಯ ಖಾಲ್ಸ ಪ್ರೌಢಶಾಲೆಯಲ್ಲಿ ಕಳೆದು, ಜಲ೦ಧರದ ಸ್ಪೋರ್ಟ್ ಕಾಲೇಜಿನಲ್ಲಿ ಮು೦ದಿನ ಓದನ್ನು ನಡೆಸಿದರು.
ಸಜ್ಜನ್ ಸಿ೦ಗ್ ಅವರ ಮೂವರು ಸಹೋದರರು ಬಲ್ಕರ್ ಸಿ೦ಗ್ ಚೀಮಾ, ಗುರ್ಮೀತ್ ಸಿ೦ಗ್ ಚೀಮಾ, ಹಾಗೂ ಕುಲದೀಪ್ ಸಿ೦ಗ್ ಚೀಮಾ, ಇವರೆಲ್ಲರೂ ಬ್ಯಾಸ್ಕೆಟ್ಬಾಲ್ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಸಜ್ಜನ್ ಸಿ೦ಗ್ ಅವರ ಅಣ್ಣ ಬಲ್ಕರ್ ಸಿ೦ಗ್ ಚೀಮಾ ಅವರು ೧೯೭೦ರಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡೆಯನ್ನು ಪರಿಚಯಿಸಿದರು. ಬಲ್ಕರ್ ಸಿ೦ಗ್ ಭಾರತದ ಭೂಸೇನೆಯ 'ಸರ್ವಿಸ್' ತ೦ಡಕ್ಕಾಗಿ ಆಡಿ ಎರಡು ಬಾರಿ ಶ್ರೇಷ್ಠ ಆಟಗಾರನೆ೦ದು ಪ್ರಶಸ್ತಿ ಗಳಿಸಿದ್ದರು. ಅವರ ಇನ್ನೊಬ್ಬ ಸಹೋದರ ಕುಲ್ದೀಪ್ ಸಿ೦ಗ್ ಬಿ.ಎಸ್.ಎಫ಼್ಗಾಗಿ ಆಡಿ ದಕ್ಷಿಣ ಆಫ಼್ರಿಕಾದಲ್ಲಿ ನಡೆದ ಅ೦ತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತಿ ಹೆಚ್ಛು ಪಾಯಿ೦ಟುಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅವರ ಮಗಳು ಗುಣೀತ್ ಕೌರ್ ಕೂಡ ಭಾರತದ ಅ೦ಡರ್-೧೭ ತ೦ಡದ ಭಾಗವಾಗಿದ್ದರು. [೨]
ಚೀಮಾ ಅವರು ೧೯ನೇ ವಯಸ್ಸಿನಲ್ಲಿ ತಮ್ಮ ಕಾಲೇಜಿನ ತ೦ಡಕ್ಕೆ ಬ್ಯಾಸ್ಕೆಟ್ಬಾಲ್ ಆಡಲು ಪ್ರಾರ೦ಭಿಸಿದರು. ಅವರ ಮೊದಲ ಪ೦ದ್ಯಾವಳಿ ಜೈಪುರದಲ್ಲಿ ಏರ್ಪಡಿಸಿದ್ದ ಅ೦ತರ-ವಿಶ್ವವಿದ್ಯಾಲಯ ಸ್ಪರ್ಧೆಯೊ೦ದರಲ್ಲಿ ಗುರು ನಾನಕ್ ದೇವ್ ವಿಶ್ವವಿದ್ಯಾಲಯದ ಪರವಾಗಿ ಆಗಿತ್ತು. ಭಾರತದ ಬ್ಯಾಸ್ಕೆಟ್ಬಾಲ್ ತ೦ಡದಲ್ಲಿ ಉಪನಾಯಕರಾಗಿದ್ದ ಸಜ್ಜನ್ ಸಿ೦ಗ್ ಅವರು ೧೯೮೨ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು ಮೂರು ಏಷ್ಯನ್ ಚಾಂಪಿಯನ್-ಶಿಪ್ಗಳಲ್ಲಿ ಭಾಗವಹಿಸಿದ್ದಾರೆ : ಕೋಲ್ಕತ್ತ ೧೯೮೧, ಹಾ೦ಗ್ ಕಾ೦ಗ್ ೧೯೮೩, ಕೌಲಾಲು೦ಪುರ್ ೧೯೮೫. ಸಜ್ಜನ್ ಸಿ೦ಗ್ ಚೀಮಾ ಅವರು ಸೌಲ್, ರಷ್ಯಾ, ಹಾಂಗ್ ಕಾಂಗ್, ಸಿ೦ಗಾಪುರ ಮು೦ತಾದ ವಿದೇಶಿ ಪ್ರದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
೧೯೯೪ರಲ್ಲಿ ತಮ್ಮ ಬ್ಯಾಸ್ಕೆಟ್ಬಾಲ್ ಜೀವನದಿ೦ದ ನಿವೃತ್ತಿ ತೆಗೆದುಕೊ೦ಡು, ಪ೦ಜಾಬ್ ಪೋಲಿಸಿನ ಮೇಲ್ವಿಚಾರಕ(ಎಸ್.ಪಿ.)ರಾಗಿ ಅಧಿಕಾರ ಸ್ವೀಕರಿಸಿ, ಲುಧಿಯಾನದ ಟ್ರಾಫ಼ಿಕ್ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು.[೩] ಹಾಗೆಯೇ ಪ೦ಜಾಬಿನ ಗಲಭೆ ವಿರೋಧಿ ದಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. [೪]
ಸಜ್ಜನ್ ಸಿ೦ಗ್ ಅವರು ತಮ್ಮ ಪೋಲೀಸ್ ವೃತ್ತಿಯಿ೦ದ ಸ್ವಯ೦ಪ್ರೇರಿತ ನಿವೃತ್ತಿ ತೆಗೆದುಕೊ೦ಡು ರಾಜಕೀಯಕ್ಕೆ ಇಳಿದರು. ಅವರು ಪ೦ಜಾಬ್ ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದ ಆಮ್ ಆದ್ಮಿ ಪಾರ್ಟಿ (ಎ.ಎ.ಪಿ)ಯನ್ನು ಸೇರಿಕೊ೦ಡರು. ಸುಲ್ತಾನ್ಪುರ್ ಲೋಧಿ ಕ್ಷೇತ್ರದಿ೦ದ [೫] ಅಭ್ಯರ್ಥಿಯಾಗಿ ನಿ೦ತರು. ಚುನಾವಣೆಯಲ್ಲಿ ಕಾ೦ಗ್ರೆಸ್ ಅಭ್ಯರ್ಥಿ ನವ್ತೇಜ್ ಸಿ೦ಗ್ ಅವರಿಗೆ ಸೋತರು.[೬] ಆದರೂ ಸಹಾ, ಇವರು ಆ ವಿಧಾನಸಭಾ ಕ್ಷೇತ್ರದ ಶೇಖಡ ೨೫.೯೭ರಷ್ಟು ಮತಗಳನ್ನು ಗಳಿಸಿದ್ದರು.
ಸಜ್ಜನ್ ಸಿ೦ಗ್ ಚೀಮಾ ಅವರು ೧೯೮೩ರಲ್ಲಿ ರಾಜಸ್ಥಾನದ ರಾಜ್ಯ ಸರ್ಕಾರದಿ೦ದ 'ಮಹಾರಾಜಾ ರಣಜೀತ್ ಸಿ೦ಗ್ ಪ್ರಶಸ್ತಿ'ಯನ್ನೂ ೧೯೯೯ರಲ್ಲಿ ಭಾರತದ ಕ್ರೀಡಾಪಟುಗಳಿಗೆ ದೊರಕುವ ಶ್ರೇಷ್ಠ 'ಅರ್ಜುನ ಪ್ರಶಸ್ತಿ'ಯನ್ನು ಪಡೆದರು.